ಶಿರಸಿ: ಆಟವಾಡುವ ಸಂದರ್ಭದಲ್ಲಿ ಸಿಡಿಲು ಬಡಿದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಬನವಾಸಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಇಲ್ಲಿನ ನಿವಾಸಿ ಸಾಜೀದ್ ಅಷ್ಪಾಕ್ ಅಲಿ ಶೇಖ್ (17)
ಸಿಡಿಲು ಬಡಿದು ಸಾವು ಕಂಡ ದುರ್ದೈವಿ. ಈತ ಸ್ನೇಹಿತರ ಜತೆಗೂಡಿ ಇಲ್ಲಿನ ಜಯಂತಿ ಪ್ರೌಢಶಾಲೆ ಸಮೀಪದ ಬಯಲಿನಲ್ಲಿ ಕ್ರಿಕೆಟ್ ಆಡುವ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಅಬ್ಬರಕ್ಕೆ ಭಯಗೊಂಡ ಸ್ನೇಹಿತರು ದೂರ ಓಡಿದರೆ ಈತ ಅಲ್ಲೇ ಕುಸಿದು ಬಿದ್ದಿದ್ದ ಎನ್ನಲಾಗಿದೆ.
ತಕ್ಷಣ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ, ಅದಾಗಲೇ ಆತನ ಪ್ರಾಣ ಹೋಗಿದ್ದನ್ನು ವೈದ್ಯರು ದೃಢೀಕರಿಸಿದರು. ನಂತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.