2013ರ ಫೆಬ್ರವರಿ ತಿಂಗಳಲ್ಲಿ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಅವರ ಪಟ್ಟಭಿಷೇಕ ನಡೆದಿತ್ತು. ಈ ವೇಳೆ ಸ್ವತಃ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾಗಿಯಾಗಿದ್ದರು. ಸುಮಾರು 1 ತಿಂಗಳ ಕಾಲ ಸ್ವಾದಿಯಲ್ಲೇ ಉಳಿದು ನೂತನ ಸ್ವಾಮೀಜಿ ಅವರಿಗೆ ಮಾರ್ಗದರ್ಶನ ಮಾಡಿದ್ದರು. ನಂತರ ಸ್ವಾದಿ ಸ್ವಾಮೀಜಿ ಶ್ರವಣಬೆಳಗೊಳಕ್ಕೆ ತೆರಳಿದ ವೇಳೆ ಅದ್ಧೂರಿ ಸ್ವಾಗತ ಕೋರಿ ಸತ್ಕರಿಸಿದ್ದರು. ಪಟ್ಟಾಭಿಷೇಕದ ನಂತರ ಸ್ವಾದಿಯ ಕೂಷ್ಮಾಂಡಿನಿ ಅಮ್ಮನ ರಥ ಸಮರ್ಪಣೆ, ಉತ್ಸವಗಳಲ್ಲಿ ಚಾರುಕೀರ್ತಿ ಭಟ್ಟಾರಕರು ಸ್ವತಃ ಪಾಲ್ಗೊಂಡಿದ್ದರು. ಸ್ವಾದಿಯ ಸ್ವಾಮೀಜಿ ಅವರಿಗೆ ಧಾರ್ಮಿಕ, ವ್ಯಾವಹಾರಿಕ ವಿಷಯಗಳಲ್ಲಿ ಹೆಚ್ಚಿನ ಮಾರ್ಗದರ್ಶನ ಬೇಕಿದ್ದರೆ ಸಂಪರ್ಕಿಸುತ್ತಿದ್ದುದು ಶ್ರವಣಬೆಳಗೊಳದ ಸ್ವಾಮೀಜಿ ಅವರನ್ನಾಗಿತ್ತು. ಪ್ರಸ್ತುತ ದಶಕದ ನಂಟು ಕೊನೆಯಾಗಿದ್ದು, ಮಠದಲ್ಲಿ ನೀರವ ಮೌನ ಆವರಿಸಿದೆ.