ಜೊಯಿಡಾ: ಕರ್ನಾಟಕ ಪ್ರಾಂತ ರೈತ ಸಂಘದ ಜೊಯಿಡಾ ತಾಲ್ಲೂಕು ಸಮಿತಿ ವತಿಯಿಂದ ಡಿಗ್ಗಿ ಗಡಿ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಎರಡು ದಿನಗಳ ಪಾದಯಾತ್ರೆಗೆ ಕಾಳಿ ಉಗಮನಾಡು ಡಿಗ್ಗಿ ಗೌಳಾದೇವಿ ಸಭಾಭವನದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಮಂಗಳವಾರ ಚಾಲನೆ ನೀಡಿದರು.
ಉತ್ತರ ಕನ್ನಡ ಜಿಲ್ಲೆ ರೈತ ಚಳುವಳಿಗೆ ತಾಯಿನೆಲವಾಗಿದೆ. ಕಳೆದ ಅನೇಕ ವರ್ಷಗಳಿಂದ ಭೂಸುಧಾರಣಾ ಕಾಯಿದೆ, ರೈತ ಚಳುವಳಿ ಮಾಡಲಾಗಿದೆ. ಈ ಪಾದಯಾತ್ರೆ ಹೋರಾಟ ಅಧ್ಯಾಯ ಬರೆಯಲಿದೆ. ಕಳೆದ ಐದು ವರ್ಷಗಳಿಂದ ಸಂಸದರು ಜನರ ಸಮಸ್ಯೆಗೆ ಚಕಾರ ಎತ್ತಿಲ್ಲ. ಮತ ಕೇಳುವಾಗ ಮಾತ್ರ ಬಡವರ ನೆನಪಾಗುತ್ತದೆ. ಜನ ಪಾಠ ಕಲಿಸುತ್ತಾರೆ ಎಂದು ಟಿ.ಯಶವಂತ ಎಚ್ಚರಿಕೆ ನೀಡಿದರು.
ಸಿಸೈ ಗ್ರಾಮದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್, ಪಾದಯಾತ್ರೆ, ಹೋರಾಟ ಪಕ್ಷಾತೀತವಾಗಿದೆ. ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಹೋರಾಟ ಮಾಡಲಾಗಿದೆ. ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಜಯ ಸಿಕ್ಕಿದೆ. ಇನ್ನೂ ಆಗಬೇಕಿದ್ದು, ಹೋರಾಟ ಅನಿವಾರ್ಯ ಎಂದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಾಮನಾಥ ನಾಯ್ಕ ಮಾತನಾಡಿದರು.
ಗೌಳಾದೇವಿ, ಸಿಸೈ ಮತ್ತು ವಾಗೇಲಿಯಿಂದ ಪ್ರತ್ಯೇಕವಾದ ತಂಡಗಳಲ್ಲಿ ಜೊಯಿಡಾ ತಾಲ್ಲೂಕು ಕೇಂದ್ರದವರೆಗೆ ಪಾದಯಾತ್ರೆ ನಡೆಸಲಾಗುತ್ತಿದ್ದು, ಮಂಗಳವಾರ ರಾತ್ರಿ ಕಿರವತ್ತಿಯಲ್ಲಿ ವಸತಿ ಇದ್ದು, ಎಲ್ಲರೂ ಸೇರಿ ಬುಧವಾರ ಕಿರವತ್ತಿಯಿಂದ ಜೊಯಿಡಾಗೆ ಪಾದಯಾತ್ರೆಯಲ್ಲಿ ಬಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ರೈತ ಸಂಘದ ಅಧ್ಯಕ್ಷ ಪ್ರೇಮಾನಂದ ವೆಳಿಪ, ಕಾರ್ಯದರ್ಶಿ ರಾಜೇಶ್ ಗಾವಡಾ, ಪ್ರಮುಖರಾದ ವಾಸು ಮಿರಾಶಿ, ಶಂಕರ್ ಮಿರಾಶಿ, ದೇವಿದಾಸ ಮಿರಾಶಿ, ಸುಭಾಷ್ ಮಿರಾಶಿ, ದಿಗಂಬರ ದೇಸಾಯಿ, ರತ್ನಾಕರ್ ದೇಸಾಯಿ, ಸುಭಾಷ್ ಬೊಂಡೇಲಿ, ಖೇಮು ಮಿರಾಶಿ, ವಿಠೋಬಾ ಮಿರಾಶಿ, ಮಾದೇವ ಮಿರಾಶಿ, ಶಾಂತಾ ಮಿರಾಶಿ, ಪ್ರಕಾಶ್ ಮಿರಾಶಿ, ದತ್ತಾ ಮಿರಾಶಿ ಮುಂತಾದವರು ಇದ್ದರು.
ರಾಮನಗರ ಪೋಲಿಸರು ಸಹಕರಿಸಿದರು.
ಕುಣಬಿ ಜನಾಂಗ ಎಸ್.ಟಿಗೆ ಸೇರಿಸಲು ವಿಫಲ
ಕಳೆದ ಐದು ವರ್ಷಗಳಿಂದ ಲೋಕಸಭೆಯಲ್ಲಿ ಸಂಸದರು ಒಂದೂ ಮಾತನಾಡಿಲ್ಲ. ಈಗ ಬಾಯಿ ಬಿಡುತ್ತಿದ್ದಾರೆ. ಕುಣಬಿ ಜನಾಂಗ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಕೊಡುಗೆ ಏನು? ಕೇಂದ್ರ ಸರ್ಕಾರ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಫಲವಾಗಿದೆ ಎಂದು ಟಿ. ಯಶವಂತ ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.