ಯಲ್ಲಾಪುರ (ಉತ್ತರ ಕನ್ನಡ): ತಾಲ್ಲೂಕಿನ ಉಮ್ಮಚಗಿ ಸಮೀಪದ ‘ಸುಮೇರು ಜ್ಯೋತಿರ್ವನ’ಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಭಾನುವಾರ ಖಾಸಗಿ ಭೇಟಿ ನೀಡಿದರು.
ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯದ ಜ್ಯೋತಿಷ ಶಾಸ್ತ್ರದ ಅಧ್ಯಾಪಕ ಡಾ.ನಾಗೇಶ ಭಟ್ಟ ಈ ಜ್ಯೋತಿರ್ವನದ ನಿರ್ಮಾತೃವಾಗಿದ್ದಾರೆ. 10 ವರ್ಷಗಳ ಹಿಂದೆ ಆಯುರ್ವೇದ ಶಾಸ್ತ್ರ ಪ್ರಕಾರದಲ್ಲಿ ಈ ವನ ನಿರ್ಮಿಸಲಾಗಿದೆ.
ಜ್ಯೋತಿರ್ವನದ ಮಾಹಿತಿ ಪಡೆದುಕೊಳ್ಳಲು ಸಚಿವರು ಬಂದಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ವನಕ್ಕೆ ಭೇಟಿ ನೀಡಲಿಲ್ಲ. ಕೇವಲ ಡಾ. ನಾಗೇಶ ಭಟ್ಟ ಅವರ ಬಳಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿ, ಶಿರಸಿಗೆ ತೆರಳಿದರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣಿಸಿದರು.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶಿರಸಿಗೆ ಆಗಮಿಸಿದ ಸುಧಾಕರ್, ಬೆಂಗಾವಲು ವಾಹನವಿಲ್ಲದೇ ಖಾಸಗಿ ವಾಹನದಲ್ಲಿ ಬಂದಿದ್ದರು. ಶಿರಸಿಯ ಉದ್ಯಮಿಯೊಬ್ಬರ ಮನೆಯಲ್ಲಿ ಊಟ ಮಾಡಿ ಉಮ್ಮಚಗಿಗೆ ಭೇಟಿ ನೀಡಿದ್ದರು. ಡಾ.ನಾಗೇಶ ಭಟ್ಟ ಅವರ ಬಳಿ ಮಾತನಾಡಲು ಸಚಿವರು ಬೆಂಗಳೂರಿನಿಂದ ಆಗಮಿಸಿದ್ದರೇ ಅಥವಾ ಇನ್ನೇನಾದರೂ ವಿಶೇಷವಿತ್ತೇ ಎನ್ನುವುದು ಕುತೂಹಲ ಮೂಡಿಸಿದೆ.