ಕಾರವಾರ: ಕಲಬುರಗಿಯಲ್ಲಿ ವಕೀಲರ ಸಂಘದ ಸದಸ್ಯ ಈರಣ್ಣಗೌಡ ಪಾಟೀಲ ಅವರನ್ನು ಹತ್ಯೆಗೈದವರನ್ನು ತಕ್ಷಣ ಬಂಧಿಸಬೇಕು ಹಾಗೂ ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ವಕೀಲರ ಸಂಘದ ಜಿಲ್ಲಾ ಘಟಕದಿಂದ ಸೋಮವಾರ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ಅವರಿಗೆ ಮನವಿ ಸಲ್ಲಿಸಲಾಯಿತು.
‘ವಕೀಲರೊಬ್ಬರನ್ನು ಹಿಂಬಾಲಿಸಿಕೊಂಡು ಬಂದು ಹತ್ಯೆ ನಡೆಸಲಾಗಿರುವ ಕೃತ್ಯ ಅತ್ಯಂತ ಅಮಾನವೀಯವಾಗಿದೆ. ದುಷ್ಕರ್ಮಿಗಳಿಗೆ ಕಾನೂನಿನ ಭಯ ಇಲ್ಲ ಎಂಬುದನ್ನು ಈ ಘಟನೆ ಸಾರಿದ್ದು, ಕೂಡಲೆ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದರು.
‘ದಿನದಿಂದ ದಿನಕ್ಕೆ ವಕೀಲರ ಮೇಲೆ ಹಲ್ಲೆ ನಡೆಸುವ, ಕಿರುಕುಳ ನೀಡುವ ಘಟನೆಗಳು ಹೆಚ್ಚುತ್ತಿವೆ. ಕಾನೂನು ರಕ್ಷಿಸುವವರಿಗೆ ನ್ಯಾಯ ಸಿಗದ ಸ್ಥಿತಿ ಇದ್ದು, ವಕೀಲರ ರಕ್ಷಣೆ ಸಲುವಾಗಿ ಪ್ರತ್ಯೇಕ ಕಾಯ್ದೆಯನ್ನೇ ಜಾರಿಗೆ ತರಬೇಕು’ ಎಂದು ಬೇಡಿಕೆ ಮಂಡಿಸಲಾಯಿತು.
ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎನ್.ಜಾಂಬಾವಳಿಕರ್, ಕಾರ್ಯದರ್ಶಿ ಗುರುನಾಥ ನಾಯ್ಕ, ಖಜಾಂಚಿ ರಾಜೇಶ ಆಚಾರಿ, ಅನುಜ ಅಗ್ರನಾಯಕ, ಸಂತೋಷ ಭಾಗವತ, ಧನಲಕ್ಷ್ಮಿ ಹಳದನಕರ ಇದ್ದರು.