ಗೋಕರ್ಣ: ಇಲ್ಲಿಯ ಭದ್ರಕಾಳಿ ಪ್ರೌಢಶಾಲೆಯ ಬಳಿ ರಾಜ್ಯ ಹೆದ್ದಾರಿಯ ಮೇಲೆ ಮಳೆಗೆ ಮಣ್ಣಿನ ರಾಶಿಯೇ ಕೊಚ್ಚಿಕೊಂಡು ಬಂದಿದ್ದು, ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದೆ. ಬೈಕ್ ಸವಾರರು ಬೀಳುತ್ತಿದ್ದು, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂಧ ಪಟ್ಟ ಜಾಗದವರು ಅವೈಜ್ಞಾನಿಕವಾಗಿ ಮಣ್ಣು ತೆಗೆದಿದ್ದೇ ಇದಕ್ಕೆ ಕಾರಣವಾಗಿದೆ. ಹಣದ ಆಸೆಗಾಗಿ ನಿರ್ದಿಷ್ಟ ಯೋಜನೆಯಿಲ್ಲದೇ ಮಣ್ಣು ತೆಗೆದಿದ್ದಾರೆ. ಮಳೆ ಬಂದರೆ ಎಲ್ಲ ಮಣ್ಣೂ ರಸ್ತೆಗೆ ಇಳಿದು ಬರುತ್ತಿದೆ. ಇದರಿಂದ ಅನೇಕ ಬೈಕ್ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದಾರೆ. ಬದಿಗಿರುವ ಗಟಾರವನ್ನೂ ಮುಚ್ಚಲಾಗಿದ್ದು, ಮಣ್ಣಿನ ಸಂಗಡ ಮಳೆ ನೀರೂ ಸಹ ರಸ್ತೆಯ ಮೇಲೆಯೇ ಹರಿಯುತ್ತಿದೆ.
ಪಕ್ಕದಲ್ಲಿಯೇ ಸರ್ಕಾರಿ ಆಸ್ಪತ್ರೆ ಇದೆ. ಮಳೆ ನಿಂತರೆ ಹಾರುವ ಮಣ್ಣಿನ ದೂಳು ಆಸ್ಪತ್ರೆಯ ಒಳಗೆಲ್ಲ ಆವರಿಸುತ್ತದೆ. ಅಷ್ಟೇ ಅಲ್ಲದೇ ಪ್ರೌಢಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ನಡೆದಾಡಲೂ ಆಗದೇ ತೊಂದರೆ ಪಡುವಂತಾಗಿದೆ. ಸ್ಥಳೀಯ ಆಡಳಿತ ಸಂಬಂಧ ಪಟ್ಟವರ ಮೇಲೆ ಕ್ರಮ ತೆಗೆದುಕೊಂಡು ರಸ್ತೆ ಸರಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.