ಭಟ್ಕಳ: ಕಾಂಗ್ರೆಸ್ ಪಕ್ಷ ಮಾತ್ರ ಬಡವರ ಪರ ಮತ್ತು ನುಡಿದಂತೆ ನಡೆಯುವ ಪಕ್ಷ ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದ ಗೋಷ್ಟಿಯಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ನುಡಿದಂತೆ ನಡೆಯುವಲ್ಲಿ ವಿಫಲವಾಗಿದೆ. ಕೊಟ್ಟ ಭರವಸೆಯಂತೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಯಾವುದೇ ಯೋಜನೆ ಜ್ಯಾರಿಗೆ ತಂದಿಲ್ಲ. ಕಪ್ಪು ಹಣ ತರಲೂ ಇವರಿಂದ ಆಗಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ನುಡಿದಂತೆ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಕೇಂದ್ರದಲ್ಲಿ 10 ವರ್ಷ ಆಡಳಿತ ನಡೆಸಿದ ಬಿಜೆಪಿ ನುಡಿದಂತೆ ನಡೆದಿಲ್ಲ. ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ಘೋಷಿಸಿದ ₹20 ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿಗೆ ಹೋಯಿತು? ಇದರಿಂದ ಯಾರಿಗೆ ಲಾಭ ಆಯಿತು ಎಂದು ಪ್ರಶ್ನಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಅವಕಾಶ ಇದ್ದು, ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಗೆಲ್ಲುವುದು ಖಚಿತ ಎಂದರು.
ದಕ್ಷಿಣ ಕನ್ನಡ ಕಾಂಗ್ರೆಸ್ ಪ್ರಮುಖರಾದ ಶಶಿಧರ ಹೆಗಡೆ, ಅಶ್ರಫ್, ನವೀನ್ ಡಿಸೋಜ, ಕೆಪಿಸಿಸಿ ಸದಸ್ಯೆ ಸರಸ್ವತಿ ಕಾಮತ್, ಬೀಬಿ ಕುಂದರ್, ರಮನಾಥ ಪೂಜಾರಿ, ಶಬ್ಬೀರ್, ಸುಲೇಮಾನ್, ನಾಗೇಂದ್ರ ಮುಂತಾದವರಿದ್ದರು.