ಶಿರಸಿ: ‘ರಾಜ್ಯಸಭಾ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್ ಹಣ ನೀಡಿದೆ ಎಂಬುದಾದರೆ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಕಾಂಗ್ರೆಸ್ನವರಿಗೆ ಎಷ್ಟು ಹಣ ನೀಡಿದೆ ಎಂಬುದನ್ನು ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಲಿ’ ಎಂದು ಶಾಸಕ ಶಿವರಾಮ ಹೆಬ್ಬಾರ ಸವಾಲೆಸೆದರು.
ರಾಜ್ಯಸಭಾ ಚುನಾವಣೆ ವೇಳೆ ಹಣ ಪಡೆದಿರುವ ಆರೋಪ ಮಾಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಬೇರೆ ರಾಜ್ಯದಲ್ಲಿ ಅಡ್ಡ ಮತದಾನ, ಗೈರು ಆಗಿಲ್ಲವೇ? ಅಲ್ಲಿ ಬಿಜೆಪಿ ಎಷ್ಟೆಷ್ಟು ಹೂಡಿಕೆ ಮಾಡಿದೆ ಎಂಬುದನ್ನೂ ಹೇಳಬೇಕು’ ಎಂದು ತಿರುಗೇಟು ನೀಡಿದರು.
‘ಈಶ್ವರಪ್ಪ ಅವರ ಮಾತನ್ನು ರಾಜ್ಯ ಬಿಜೆಪಿಯೇ ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ಏನೆಲ್ಲಾ ಮಾಡಿಕೊಂಡು ರಾಜೀನಾಮೆ ನೀಡುವ ಸ್ಥಿತಿ ಬಂದಿತು ಎಂಬುದು ನಾಡಿನ ಜನಕ್ಕೆ ಹಾಗೂ ಸ್ವತಃ ಅವರಿಗೂ ತಿಳಿದಿದೆ. ಅಲ್ಲದೇ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವಾಗ ಈಶ್ವರಪ್ಪ ನಮಗೆ ಎಷ್ಟು ಕೋಟಿ ಕೊಟ್ಟಿದ್ದರು? ಎಂಬುದನ್ನು ಹೇಳಬೇಕಾಗುತ್ತದೆ’ ಎಂದರು.
‘ಈಶ್ವರಪ್ಪನವರು ಗಾಜಿನ ಮನೆಯಲ್ಲಿ ಕುಳಿತುಕೊಂಡು ಕಲ್ಲು ಹೊಡೆಯುವಾಗ ಎಚ್ಚರಿಕೆಯಿಂದ ಇರಬೇಕು. ಹಾಗಿರುವುದು ಅವರ ಹಿರಿತನಕ್ಕೂ ಗೌರವ’ ಎಂದರು.
ಇದೇ ವೇಳೆ, ಲೋಕಸಭಾ ಚುನಾವಣೆಗೆ ಸ್ಪರ್ಧೆಯ ಕುರಿತಂತೆ ‘ಇದು ಕೇವಲ ಮಾಧ್ಯಮ ಸೃಷ್ಟಿ' ಎಂದು ಹೆಬ್ಬಾರ ಪ್ರತಿಕ್ರಿಯಿಸಿದರು.