ಶಿರಸಿ: ಉತ್ತರ ಕನ್ನಡವನ್ನು ಪ್ರತ್ಯೇಕಿಸಿ ಶಿರಸಿಯನ್ನು ಹೊಸ ಜಿಲ್ಲೆಯಾಗಿ ಘೋಷಿಸುವಂತೆ ಶಿರಸಿ ಜಿಲ್ಲಾ ಹೋರಾಟ ಸಮಿತಿ ಶುಕ್ರವಾರ ಪತ್ರ ಚಳುವಳಿ ಆರಂಭಿಸಿದೆ.
ನಗರದ ಬಿಡ್ಕಿಬೈಲಿನಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪತ್ರ ಚಳುವಳಿಗೆ ಚಾಲನೆ ನೀಡಲಾಯಿತು. ಹಿರಿಯ ಗಾಂಧಿವಾದಿ ಕಾಶಿನಾಥ ಮೂಡಿ ಚಾಲನೆ ನೀಡಿದರು.
ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಶಿರಸಿ ಇನ್ನಿತರ ಘಟ್ಟದ ಮೇಲಿನ ತಾಲ್ಲೂಕಿಗಳಿಗೆ ಜಿಲ್ಲಾಕೇಂದ್ರ ದೂರದಲ್ಲಿದೆ. ಶಿರಸಿ ಸಹಿತ ಇನ್ನಿತರ ತಾಲ್ಲೂಕುಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ವಾಣಿಜ್ಯ ಕೇಂದ್ರವೂ ಆಗಿರುವ ಶಿರಸಿ ಜಿಲ್ಲಾಕೇಂದ್ರವಾಗಲು ಅರ್ಹವಾಗಿದೆ. ಹೀಗಾಗಿ ಸರ್ಕಾರ ಶಿರಸಿ ಸೇರಿದಂತೆ ಘಟ್ಟದ ಮೇಲಿನ ಇನ್ನಿತರ ತಾಲ್ಲೂಕುಗಳನ್ನು ಸೇರಿಸಿ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಯೊಬ್ಬರಿಂದಲೂ ತಲಾ ಮೂರು ಪತ್ರಗಳನ್ನು ಬರೆಯಿಸಿ ಮುಖ್ಯಮಂತ್ರಿ, ರಾಜ್ಯಪಾಲರಿಗೆ ರವಾನಿಸಲಿದ್ದೇವೆ ಎಂದು ಹೇಳಿದರು. ಚಂದ್ರು ಎಸಳೆ, ಗಣಪತಿ ನಾಯ್ಕ, ಈರೇಶ ಇನ್ನಿತರರು ಇದ್ದರು.