ಕೆರೆಯ ಸೌಂದರ್ಯ ಹೆಚ್ಚಿಸುವ ಜತೆಗೆ ಇನ್ನಷ್ಟು ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ 2014ರಲ್ಲಿ ಅಂದಿನ ನಗರಸಭೆ ಅಧ್ಯಕ್ಷರಾಗಿದ್ದ ಶ್ರೀಕಾಂತ ತಾರೀಬಾಗಿಲು ಅವರ ವಿಶೇಷ ಆಸಕ್ತಿಯಿಂದ, ಕೋಟೆಕೆರೆಯ ಮಧ್ಯದಲ್ಲಿ ಎರಡು ಕಾರಂಜಿ ಅಳವಡಿಸಲಾಗಿತ್ತು. ₹ 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕಾರಂಜಿ, ಹಿರಿಯರು, ಮಕ್ಕಳೆನ್ನದೆ ಎಲ್ಲರನ್ನೂ ತನ್ನೆಡೆಗೆ ಬರಮಾಡಿಕೊಳ್ಳುತ್ತಿತ್ತು. ಆದರೆ, ಆರು ತಿಂಗಳುಗಳಿಂದ ಈ ಕಾರಂಜಿ, ಬಣ್ಣ ಕಳಚಿಕೊಂಡು, ಕತ್ತಲೆಯಲ್ಲಿ ಲೀನವಾಗಿದೆ. ಹಾಳಾಗಿ ತಿಂಗಳುಗಳು ಕಳೆದರೂ, ಇನ್ನೂ ದುರಸ್ತಿ ಮಾಡದ ನಗರಸಭೆಯ ಅನಾದರಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.