ಕುಮಟಾ: `ಹಿಂಸೆ ಬಿಟ್ಟು ಬದುಕಿನ ಪ್ರೀತಿಯ ಮಾರ್ಗದ ಬಗ್ಗೆ14 ನೇ ಶತಮಾನದಲ್ಲಿ ಮಹಮದ್ ಪೈಗಂಬರ್ ಹೇಳಿರುವುದನ್ನೇ ಬಸವಣ್ಣ, ಬುದ್ಧ, ಅಂಬೇಡ್ಕರ್ ಹಾಗೂ ಗಾಂಧೀಜಿ ಪುನರುಚ್ಚರಿಸಿದ್ದಾರೆ' ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅಭಿಪ್ರಾಯಪಟ್ಟರು.
ನಾರ್ಥ್ ಕೆನರಾ ಮುಸ್ಕಿಂ ಯುನೈಟೆಡ್ ಫೋರಂನ ಕುಮಟಾ ಘಟಕ ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಕೋಮು ಸೌಹಾರ್ದತಾ ಸಮಾವೇಶದಲ್ಲಿ ಅವರು ಮಾತನಾಡಿದರು.
`ಹಿಂದು ಧರ್ಮದಲ್ಲಿ ಜಾತಿ ಬೇಧ ಎಂಬುದು ಇಲ್ಲ. ಊಳುವವನೇ ಒಡೆಯ ಎನ್ನುವ ನೀತಿಯನ್ನು ಮೊದಲು ಜಾರಿಗೆ ಬಂದದ್ದು ಇಸ್ಲಾಂ ಧರ್ಮದಲ್ಲಿ. ಅನೇಕ ಧರ್ಮದವರು ಒಟ್ಟಿಗೆ ಕುಳಿತು ಸಹೋದರತೆಯಿಂದ ಊಟ ಮಾಡು ಎಂಬುದು ಅಲ್ಲಾನ ಆದೇಶ. ಕತ್ತಲೆಯಲ್ಲಿ ಬೆಳಕು ಬೀರು, ರಸ್ತೆಯಲ್ಲಿದ್ದ ಅಡೆ-ತಡೆ ನಿವಾರಿಸಿ ನಡೆದಾಡುವಂತೆ ಮಾಡು ಎನ್ನುವುದು ಜೆಹಾದ್ ಎನ್ನುವ ಶಬ್ದದ ನಿಜವಾದ ಅರ್ಥವಾಗಿದ್ದು, ಅದನ್ನು ತಪ್ಪಾಗಿ ಅರ್ಥೈಸಿ ನಡೆದುಕೊಳ್ಳಲಾಗುತ್ತಿದೆ' ಎಂದರು.
ಭಟ್ಕಳದ ಅಂಜುಮನ್ ಸಂಸ್ಥೆ ಅಧ್ಯಕ್ಷ ಸೈಯ್ಯದ್ ಕಲೀಲ್ ಮಾತನಾಡಿ, `ಇಸ್ಲಾಂ ಸದಾ ಮಾನವತಾ ವಾದವನ್ನು ಸಾರುತ್ತದೆ. ಅದರಲ್ಲಿ ಜಾತಿ, ಮತ ಎನ್ನುವುದಿಲ್ಲ. ಗಾಂಧೀಜಿಯವರ ಅಹಿಂಸಾ ವಾದವೇ ಇಸ್ಲಾಂ ಧರ್ಮದ ಸಾರಾಂಶವೂ ಆಗಿದೆ' ಎಂದರು.
ಉದ್ಯಮಿ ಯಶೋಧರ ನಾಯ್ಕ, ಪತ್ರಕರ್ತ ರಾಜಾ ಮಾನ್ವಿ ಮಾತನಾಡಿದರು. ಡಾ.ಎನ್.ಎ.ಖಾನ್, ಬಸ್ತಿ ಮಲಿಕ್, ಶೇಖ್ ಅಲಿ, ಇಮ್ತಿಯಜ್ ಶೇಖ್, ಎ.ಬಿ. ಮುಲ್ಲಾ ಇದ್ದರು. ನಾರ್ಥ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಂ ಕುಮಟಾ ಘಟಕ ಅಧ್ಯಕ್ಷ ಮುಝಾಫರ್ ಶೇಖ್ ಸ್ವಾಗತಿಸಿದರು. ಡಾ. ಹನೀಫ್ ಶಾಬಾಬ್ ನಿರೂಪಿಸಿದರು. ವಕೀಲ ಆರ್.ಜಿ.ನಾಯ್ಕ, ಉದ್ಯಮಿ ಹರೀಶ್ ಶೇಟ್, ಕವಿ ಬಿ.ಎ. ಸನದಿ, ಇಬ್ರಾಹಿಂ ಸಾಬ್ ಮೊದಲಾದವರಿದ್ದರು.