ಕುಮಟಾ: ‘ಉತ್ತರ ಕನ್ನಡ ಜಿಲ್ಲೆಯ ಸುಮಾರು 60 ಸಾವಿರದಷ್ಟು ಅರಣ್ಯ ಅತಿಕ್ರಮಣದಾರರಿಗೆ ಸರ್ಕಾರ ನ್ಯಾಯಯುತವಾಗಿ ಭೂಮಿ ಮಂಜೂರು ಮಾಡದಿದ್ದರೆ ಅವರೆಲ್ಲ ಅತಂತ್ರರಾಗಲಿದ್ದಾರೆ’ ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರರ ವೇದಿಕೆ ಅಧ್ಯಕ್ಷ ಅಧ್ಯಕ್ಷ ಎ. ರವೀಂದ್ರ ನಾಯ್ಕ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಜಿಲ್ಲಾ ಅರಣ್ಯ ಅತಿಕ್ರಮಣದಾರರ ವೇದಿಕೆ ಸಭೆಯಲ್ಲಿ ಅವರು ಮಾತನಾಡಿದರು.
‘ಕೃಷಿ ಹಾಗೂ ವಾಸದ ಉದ್ದೇಶಕ್ಕಾಗಿ ಹಿಂದಿನಿಂದಲೂ ಅರಣ್ಯ ಭೂಮಿಯಲ್ಲಿ ಅತಿಕ್ರಮಣ ಮಾಡಿಕೊಂಡು ಬಂದಿರುವ ಬಡ ರೈತರಿಗೆ ಹಕ್ಕು ಪತ್ರ ನೀಡುವ ಬಗ್ಗೆ ವೇದಿಕೆ ಹೋರಾಟ ನಡೆಸುತ್ತಿದ್ದರೂ ಇದುವರೆಗೂ ಜಿಲ್ಲಾಡಳಿತ ಅದಕ್ಕೆ ಸ್ಪಂದಿಸುವ ಇಚ್ಛಾಶಕ್ತಿ ತೋರಿಲ್ಲ. ಹೆಚ್ಚಿನ ಜನಪ್ರತಿನಿಧಿಗಳಿಗೆ ಈ ಸಮಸ್ಯೆ ನಿವಾರಿಸಲು ಬೇಕಾದ ಕಾನೂನು ತಿಳಿವಳಿಕೆಯೂ ಇಲ್ಲದೆ ಸಮಸ್ಯೆ ನೆನೆಗುದಿಗೆ ಬಿದ್ದಿದೆ’ ಎಂದರು.
‘ಅತಿಕ್ರಮಣದಾರರು ಮೂರು ತಲೆಮಾರಿನ ದಾಖಲೆ ಒದಗಿಸಬೇಕು ಎನ್ನುವುದನ್ನು ಬಿಟ್ಟು ಸರ್ಕಾರ ಭೂಮಿ ಮಂಜೂರಿ ಮಾಡುವಾಗ ಸಾಂದರ್ಭಿಕ ದಾಖಲೆಗಳನ್ನು ಪರಿಗಣಿಸಬೇಕು. ಸೆ. 27ರಿಂದ 30 ರವರೆಗೆ ಮುರ್ಡೇಶ್ವರದಿಂದ ಕಾರವಾರದವರೆಗೆ ಜಿಲ್ಲಾ ಅರಣ್ಯ ಅತಿಕ್ರಮಣದಾರರ ವೇದಿಕೆ ವತಿಯಿಂದ ನಡೆಯುವ ಸುಮಾರು 114 ಕಿ.ಮೀ. ದೂರದ ಅತಿಕ್ರಮಣದಾರರ ಪಾದಯಾತ್ರೆ ಐತಿಹಾಸಿಕವಾಗಲಿದೆ. ಕುಮಟಾದಲ್ಲಿ ಮಹತ್ವದ ಸಮಾವೇಶ ನಡೆಯಲಿದೆ’ ಎಂದರು.
ಅತಿಕ್ರಮಣದಾರರು ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವೇದಿಕೆಯಲ್ಲಿ ಮಂಜು ಮರಾಠಿ, ಜಿ.ಪಿ.ಮರಾಠಿ ಹಾಗೂ ದೇವರಾಜ ಮರಾಠಿ ಮೊದಲಾದವರು ಉಪಸ್ಥಿತರಿದ್ದರು.