ಹೊಸಪೇಟೆ (ವಿಜಯನಗರ): ಸಾರಿಗೆ ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಅದರ ಚಕ್ರದಡಿಗೆ ಸಿಲುಕಿ ಮೂರು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.
ತಾಲ್ಲೂಕಿನ ನಾಗಲಾಪುರದ ನಿವಾಸಿ ಕೇಸರಿ ನಂದನ್ (3) ಮೃತಪಟ್ಟ ಬಾಲಕ. ತನ್ನ ತಾಯಿ ಮಲ್ಲಮ್ಮ ಜೊತೆಗೆ ಕೊಪ್ಪಳದ ಅಜ್ಜಿಯ ಮನೆಯಿಂದ ಊರಿಗೆ
ವಾಪಸಾಗುತ್ತಿದ್ದಾಗ ಇಲ್ಲಿನ ಬಸ್ ನಿಲ್ದಾಣದ ಗಂಗಾವತಿ ಕಡೆಗೆ ಹೋಗುವ ಪ್ಲಾಟ್ ಫಾರಂನಲ್ಲಿ ನಿಂತಿದ್ದ. ಈ ವೇಳೆ ಬಸ್ ಹಿಂದಕ್ಕೆ ಚಲಿಸಿದ್ದು, ಬಾಲಕ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಮತೃಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.