ಹೊಸಪೇಟೆ (ವಿಜಯನಗರ): ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ದಿಂದ (ಸಿ.ಎಫ್.ಐ.) ಪ್ರಸಕ್ತ ಸಾಲಿನ ಸದಸ್ಯತ್ವ ಅಭಿಯಾನ ಮಂಗಳವಾರ ನಗರದಲ್ಲಿ ನಡೆಯಿತು.
ಸಂಘಟನೆಯ ಬಳ್ಳಾರಿ ಜಿಲ್ಲಾ ಸಮಿತಿ ಸದಸ್ಯ ಫರ್ದಿನ್ ಅವರು ವಿದ್ಯಾರ್ಥಿಗಳಿಗೆ ಸದಸ್ಯತ್ವದ ಕೂಪನ್ ಕೊಟ್ಟು ಚಾಲನೆ ನೀಡಿದರು. ‘ನಮ್ಮ ಶಿಕ್ಷಣ–ಹಕ್ಕು–ಪ್ರತಿರೋಧ’ ಎಂಬ ಘೋಷವಾಕ್ಯದಡಿ ಈ ಬಾರಿಯ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ. ಆಗಸ್ಟ್ 30ರ ವರೆಗೆ ಅಭಿಯಾನ ಜರುಗಲಿದೆ’ ಎಂದು ಹೇಳಿದರು.
ಸಂಘಟನೆಯು 13 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸಾಮಾಜಿಕ ಪಿಡುಗುಗಳ ನಿರ್ಮೂಲನೆ, ವಿದ್ಯಾರ್ಥಿಗಳ ಹಕ್ಕುಗಳ ಸಂರಕ್ಷಣೆ, ಸಮಾಜದಲ್ಲಿ ಪ್ರಭುತ್ವದಿಂದ ನಡೆಯುತ್ತಿರುವ ಅನ್ಯಾಯಗಳ ವಿರುದ್ಧದ ಹೋರಾಟದಲ್ಲಿ ರಾಜ್ಯದಲ್ಲಿ ಜವಾಬ್ದಾರಿಯುತ ವಿದ್ಯಾರ್ಥಿ ಸಂಘಟನೆಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಜಿಲ್ಲಾ ಸಮಿತಿ ಸದಸ್ಯ ಶೇಕ್ಷಾವಲಿ, ಶಿವಮೊಗ್ಗ ಜಿಲ್ಲಾ ಕೋಶಾಧಿಕಾರಿ ಯೂಸುಫ್ ಇದ್ದರು.