ಹೊಸಪೇಟೆ (ವಿಜಯನಗರ): ಬರ ಪರಿಸ್ಥಿತಿ ವೀಕ್ಷಿಸಲು ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ತಂಡ ಶನಿವಾರ ತಾಲ್ಲೂಕಿನ ನಂದಿಬಂಡೆಯಲ್ಲಿ ಒಣಗಿದ ಮೆಕ್ಕೆಜೋಳ ಗದ್ದೆಗಳನ್ನು ವೀಕ್ಷಿಸಿತು.
ಮರಿಯಮ್ಮ ಎಂಬ ರೈತ ಮಹಿಳೆ ಬೆಳೆದಿದ್ದ 3.5 ಹೆಕ್ಟೇರ್ ಮೆಕ್ಕೆಜೋಳ ಗದ್ದೆ ಸಂಪೂರ್ಣ ಒಣಗಿ ಹೋಗಿದ್ದನ್ನು ಕಂಡ ತಂಡಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಪೂರಕ ಮಾಹಿತಿ ನೀಡಿದರು.
ಮರಿಯಮ್ಮ ಅವರಿಗೆ ಹಿಂದಿ, ಇಂಗ್ಲಿಷ್ ಬರುತ್ತಿರಲಿಲ್ಲ, ಅವರ ಪರವಾಗಿ ಹಿಂದಿ ಬರುವ ಪರಶುರಾಮಪ್ಪ ಅವರು ರೈತರಿಗೆ ಆಗಿರುವ ನಷ್ಟವನ್ನು ವಿವರಿಸಿದರು.
ಪಕ್ಕದ ಇನ್ನೊಂದು ಹೊಲಕ್ಕೆ ತೆರಳಿದ ತಂಡ ಸಂಪೂರ್ಣ ಒಣಗಿ ಹೋಗಿರುವ ಮೆಕ್ಕೆಜೋಳ ಬೆಳೆ ಕಂಡು ದಂಗಾಯಿತು.
ಬಳಿಕ ಮಾತನಾಡಿದ ಕೇಂದ್ರ ಬರ ವೀಕ್ಷಕರು, ಇಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ, ಕೇಂದ್ರಕ್ಕೆ ಶೀಘ್ರ ವರದಿ ಕೊಡುತ್ತೇವೆ ಎಂದರು.
ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಮಾತನಾಡಿ, ‘ಜಿಲ್ಲೆಯಲ್ಲಿ 2.69 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾಗೂ 4 ಸಾವಿರ ಹೆಕ್ಟೇರ್ ತೋಟಗಾರಿಕಾ ಜಮೀನಿನಲ್ಲಿ ಬೆಳೆ ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ ಒಟ್ಟು ಹಾನಿ ಸಂಭವಿಸಿದ ಬೆಳೆ ಪೈಕಿ ಶೇ 60 ರಷ್ಟು ಮೆಕ್ಜೆಜೋಳ ಇದೆ. ಇದರ ಸಂಪೂರ್ಣ ಮಾಹಿತಿಯನ್ನು ತಂಡಕ್ಕೆ ನೀಡಲಾಗಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್ ಇತರರು ಇದ್ದರು.