ಹೊಸಪೇಟೆ (ವಿಜಯನಗರ): ನಗರಸಭೆಯು ಆನ್ಲೈನ್ ಮೂಲಕ ಫಾರಂ 3, ಮ್ಯುಟೇಶನ್ ಸೇರಿದಂತೆ ಇತರೆ ಸೇವೆಗಳನ್ನು ಒದಗಿಸಬೇಕೆಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.
ವಿಜಯನಗರ ನಾಗರೀಕ ವೇದಿಕೆ, ಜಿಲ್ಲಾ ನಿವೃತ್ತ ಪೋಲಿಸ್ ಅಧಿಕಾರಿಗಳ ಸಂಘ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಹಿಂದುಳಿದ ವರ್ಗಗಳ ಒಕ್ಕೂಟದ ಸಂಘಟನೆಗಳ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ವಿಜಯನಗರ ಸಂರಕ್ಷಣಾ ವೇದಿಕೆ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ನಗರಸಭೆಯಲ್ಲಿ ಸಾರ್ವಜನಿಕರು ತಮ್ಮ ಮನೆ, ನಿವೇಶನಗಳ ದಾಖಲೆ ಪಡೆಯಲು ವರ್ಷಗಟ್ಟಲೆ ಅಲೆದಾಡುವ ಪರಿಸ್ಥಿತಿ ಇದೆ. ಮನೆ, ನಿವೇಶನ ಖರೀದಿ, ಮಾರಾಟ, ಬ್ಯಾಂಕ್ ಸಾಲ ಪಡೆಯಲು ಫಾರಂ 3 ಬೇಕು. ಆದರೆ, ಸಕಾಲದಲ್ಲಿ ದಾಖಲೆಗಳು ಸಿಗುತ್ತಿಲ್ಲ. ಆನ್ಲೈನ್ ವ್ಯವಸ್ಥೆ ಜಾರಿಗೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬಹುದು ಎಂದು ತಿಳಿಸಿದ್ದಾರೆ.
ಮುಖಂಡರಾದ ವೈ. ಯಮುನೇಶ, ಕೆ.ಕುಮಾರಸ್ವಾಮಿ, ಯು.ಆಂಜನೇಯಲು, ಯು.ಅಶ್ವತಪ್ಪ, ಎಂ.ಜಡೆಪ್ಪ, ಮಹಾಂತೇಶ್, ಕೃಷ್ಣ ಜೋಶಿ, ಹೊಸಗೇರಪ್ಪ, ಟಿ.ಇಬ್ರಾಹಿಂ ಇದ್ದರು.