ಅರಸೀಕೆರೆ: ಹರಪನಹಳ್ಳಿ ಕ್ಷೇತ್ರಕ್ಕೆ ಒಳಪಡುವ ಗಡಿ ಭಾಗದ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ಬದ್ಧನಾಗಿದ್ದೇನೆ ಎಂದು ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ ಹೇಳಿದರು.
ಹೋಬಳಿಯ ಗಡಿಭಾಗದ ಚಿಕ್ಕಮೆಗಳಗೆರೆ ಆಂಜನೇಯ ಸ್ವಾಮಿ ಗೋಪುರ ಉದ್ಘಾಟನೆ ಹಾಗೂ ಕಾರ್ತಿಕೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಹಳ್ಳಿಗಳ ಅಭಿವೃದ್ಧಿ ಕಾರ್ಯಗಳು ಕೇವಲ ಉತ್ಸವ, ದೇವಸ್ಥಾನ ನಿರ್ಮಾಣಕ್ಕೆ ಸೀಮಿತವಾಗಬಾರದು. ಗ್ರಾಮದ ಸಮಗ್ರ ಅಭಿವೃದ್ಧಿ ಕಡೆ ಯುವಕರು ಗಮನ ಹರಿಸಬೇಕು. ಈಗಾಗಲೇ ಕಳೆದ ಸರ್ಕಾರದ ಅವಧಿಯಲ್ಲಿ ಮಂಜೂರಾದ 3000 ಆಶ್ರಯ ಮನೆಗಳ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಪ್ರಾಮಾಣಿಕತೆ ತೋರಬೇಕು’ ಎಂದ ಅವರು, ಚಿಕ್ಕಮೆಗಳಗೆರೆ ಗ್ರಾಮದಲ್ಲಿ ವಸತಿ ರಹಿತರಿಗೆ ಸರ್ಕಾರದ ಭೂಮಿ ನೀಡಿದಲ್ಲಿ ವಸತಿಗೆ ಗೃಹ ನಿರ್ಮಿಸಿ ವಿತರಿಸಲಾಗುವುದು ಎಂದರು.
‘ಈಚೆಗೆ ಕ್ಷೇತ್ರಕ್ಕೆ ಒಳಪಡುವ ಭದ್ರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಕಾಡ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆದಿದ್ದು, ಮಳೆ ಕೊರತೆ ಇರುವ ಕಾರಣ ಕಾಲುವೆಗೆ ನೀರು ಹರಿಯುವುದು ಅನುಮಾನವಿದೆ. ರೈತರು ಧೃತಿಗೆಡದೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರತಿಭಾ ಪರಶುರಾಮಪ್ಪ, ರವೀಂದ್ರಬಾಬು, ಈ.ನಾಗರಾಜ್, ದೊಡ್ಡಜ್ಜರ ಹನುಮಂತಪ್ಪ, ನೀಲಪ್ಪ, ಗೌಡ್ರ ಸಿದ್ದಪ್ಪ, ಈ ಚನ್ನಪ್ಪ, ರೇವಣ್ಣ, ಚೌಡಪ್ಪ, ಹನುಮಂತಪ್ಪ, ವೊಡ್ಡಿನಹಳ್ಳಿ ಮಂಜುನಾಥ್, ಕೆ.ಕರಿಬಸವರಾಜ್ ಉಪಸ್ಥಿತರಿದ್ದರು.