ಹೊಸಪೇಟೆ (ವಿಜಯನಗರ): ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕೆಂದು ಹೇಳಿಕೆ ಕೊಟ್ಟಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಅಣಕು ಶವಯಾತ್ರೆ ಮಂಗಳವಾರ ನಗರದಲ್ಲಿ ನಡೆಯಿತು.
ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಮಂಗಳವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಹಾತ್ಮ ಗಾಂಧೀಜಿ ವೃತ್ತದ ಮೂಲಕ ಡಾ. ಪುನೀತ್ ರಾಜಕುಮಾರ್ ವೃತ್ತದವರೆಗೆ ಸಚಿವರ ಅಣಕು ಶವಯಾತ್ರೆ ಮಾಡಲಾಯಿತು. ಅವರ ವಿರುದ್ಧ ಧಿಕ್ಕಾರ ಕೂಗಿದರು. ಸಚಿವರನ್ನು ವಜಾಗೊಳಿಸುವಂತೆ ಆಗ್ರಹಿಸಿದರು.
ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ಗೆ ಸಲ್ಲಿಸಿದರು.
‘ಅಶ್ವತ್ಥನಾರಾಯಣ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅನಾಗರಿಕರಂತೆ ವರ್ತಿಸಿದ್ದಾರೆ. ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ, ಭಯದ ವಾತಾವರಣ ಮೂಡಿಸುವ ದುರುದ್ದೇಶದಿಂದ ಹೇಳಿಕೆ ಕೊಟ್ಟಿದ್ದಾರೆ. ಅವರು ಎಷ್ಟರಮಟ್ಟಿಗೆ ಅಸ್ವಸ್ಥರಾಗಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ. ಒಂದು ಜನಾಂಗದ ಮತ ಸೆಳೆಯಲು ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕೆಂದು ಹೇಳಿಕೆ ಕೊಟ್ಟಿರುವುದು ಖಂಡನಾರ್ಹ’ ಎಂದು ತಿಳಿಸಿದರು.
ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಸಹೋದರತ್ವ, ಭಾತೃತ್ವ, ಸಮಾನತೆಯನ್ನು ಎತ್ತಿ ಹಿಡಿಯುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಅಶ್ವತ್ಥನಾರಾಯಣ ಅವರು ಪ್ರಜಾಪ್ರಭುತ್ವದ ಕಗ್ಗೊಲೆಗೆ ಪ್ರಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಬಳಗದ ಮುಖಂಡರಾದ ಕೆ.ರವಿಕುಮಾರ್, ಜಿ.ಗೌಡರ ರಾಮಚಂದ್ರ, ಬಣ್ಣದಮನೆ ಸೋಮಶೇಖರ್, ಡಿ.ವೆಂಕಟರಮಣ, ಎಚ್.ಮಹೇಶ್, ವೀರಭದ್ರ ನಾಯಕ, ಅಯ್ಯಾಳಿ ಮೂರ್ತಿ, ದಾಸನಾಳ್ ಹನುಮೇಶಿ, ದಲ್ಲಾಳಿ ಕುಬೇರ, ಜಿ.ಗೋಪಾಲಕೃಷ್ಣ, ಅಯ್ಯಾಳಿ ಮೂರ್ತಿ, ಜೊಂಡಿಲಿಂಗಪ್ಪ, ಬಿಸಾಟಿ ತಾಯಪ್ಪ, ಜಂಬಣ್ಣ ಮೇಟಿ, ಬಸಲಿಂಗಪ್ಪ ಎಸ್.ಮೇಟಿ, ಜಿ.ವಿನಾಯಕ, ರಾಘವೇಂದ್ರ ಸಂಕ್ಲಾಪುರ, ದಮ್ಮೂರು ಮಂಜುನಾಥ, ಬೊಲ್ಲೂರ ಬಿ.ಯಂಕೋಬಿ, ಡಿ.ಭೀಮೇಶಿ, ಕೇಶವ, ಗಂಟೆ ಉಮೇಶ, ಜಡಿಯಪ್ಪ, ಹನುಮಂತ ಡಿ., ಕೆ.ಸಿದ್ದಪ್ಪ ಇತರರಿದ್ದರು.