ಹೊಸಪೇಟೆ(ವಿಜಯನಗರ): ಸ್ಥಳೀಯ ನಿವಾಸಿಗಳ ಅನುಕೂಲಕ್ಕಾಗಿ ಅಂಚೆ ಪೆಟ್ಟಿಗೆ ಅಳವಡಿಸುವಂತೆ ಸಂಕ್ಲಾಪುರ ಬಳಿಯ ವಿನಾಯಕ ನಗರದ ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಅವರು ಇತ್ತೀಚೆಗೆ ಅಂಚೆ ಅಧಿಕಾರಿ ರಶೀದ್ ಸಾಬ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ನಗರದ ಹೊಲವಲಯದಲ್ಲಿರುವ ಸಂಕ್ಲಾಪುರದ ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸ್ಥಳೀಯ ನಿವಾಸಿಗಳು ಅಂಚೆ ಪತ್ರ ಸಲ್ಲಿಸಲು ವಿನಾಯಕ ನಗರದಿಂದ 2 ಕಿ.ಮೀ ದೂರದ ಜೆ.ಪಿ.ನಗರಕ್ಕೆ ಹೋಗಬೇಕಿದೆ. ವಿನಾಯಕ ನಗರದಲ್ಲಿ ಅಂಚೆ ಇಲಾಖೆಯಿಂದ ಅಂಚೆ ಪೆಟ್ಟಿಗೆ ಅಳವಡಿಸಿದರೆ ಸ್ಥಳೀಯರಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಅಂಚೆ ಅಧಿಕಾರಿ ರಶೀದ್ ಸಾಬ್, ‘ಅಂಚೆ ಪೆಟ್ಟಿಗೆ ಬೇಡವೆನ್ನುತ್ತಿರುವ ಕಾಲದಲ್ಲಿ ಅಂಚೆ ಪೆಟ್ಟಿಗೆಗಾಗಿ ಮನವಿ ಸಲ್ಲಿಸಿರುವುದು ಸಂತೋಷದ ವಿಷಯವಾಗಿದೆ. ಕೇವಲ ಪೆಟ್ಟಿಗೆ ಪಡೆದು ಸುಮ್ಮನಾಗದೇ ಸ್ಥಳೀಯ ನಿವಾಸಿಗಳು ಪತ್ರ ವ್ಯವಹಾರ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.
ವಿನಾಯಕ ನಗರದ ನಿವಾಸಿಗಳಾದ ತಿಪ್ಪೇಸ್ವಾಮಿ, ಗೋಪಾಲ ಜೋಷಿ, ಜಂಬಣ್ಣ, ಈರೇಶ, ವೈ.ಯಮುನೇಶ್ ಇದ್ದರು.