ಹೊಸಪೇಟೆ (ವಿಜಯನಗರ): ‘ವಿಜಯನಗರದ ಕಾಲದಲ್ಲಿ ವಜ್ರ, ವೈಢೂರ್ಯವನ್ನು ರಸ್ತೆಯಲ್ಲಿ ಅಳೆದು ಕೊಡುತ್ತಿದ್ದರು. ಜನ ಸುಖ, ಸಮೃದ್ಧಿಯಲ್ಲಿ ಇದ್ದರು. ಅದೇ ಸ್ಥಿತಿ ರಾಜ್ಯದಲ್ಲಿ ಮತ್ತೆ ತರಬೇಕು ಎಂಬ ಕಾರಣಕ್ಕೆ ‘ಗ್ಯಾರಂಟಿ’ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಂಪಿಯಲ್ಲಿ ಶುಕ್ರವಾರ ರಾತ್ರಿ ಹಂಪಿ ಉತ್ಸವವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ ಅವರು, ‘ಯಾವ ಟೀಕೆಗೂ ಜಗ್ಗದೆ ಗ್ಯಾರಂಟಿ ಜಾರಿಗೆ ಬಂದಿದೆ. ಇದು ಮುಂದುವರಿಯಲಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆಯಲ್ಲಿ ವಂಚಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಜನರಿಗೆ ಕೊಟ್ಟ ಮಾತು ಈಡೇರಿಸಿದೆ’ ಎಂದರು.
‘ರಾಜ್ಯದಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಇದೆ. ನಾಲ್ಕು ತಿಂಗಳಿಂದ ಬರ ಪರಿಹಾರಕ್ಕೆ ಕೇಂದ್ರವನ್ನು ಕೇಳುತ್ತಲೇ ಇದ್ದೇವೆ. ನಯಾ ಪೈಸೆ ಕೊಟ್ಟಿಲ್ಲ. ಆದರೆ ನಮ್ಮ ಕಲಾವಿದರು, ಜನರಿಗೆ ಹಂಪಿಯ ವೈಭವವನ್ನು ಮತ್ತೆ ನೆನಪಿಸಲು ಬರಗಾಲ ಇದ್ದರೂ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.