ಹೂವಿನಹಡಗಲಿ (ವಿಜಯನಗರ ಜಿಲ್ಲೆ) : ‘ಮುಸ್ಲಿಮರ ಮೀಸಲಾತಿ ರದ್ದಾಗುವುದಿಲ್ಲ. ಸಮುದಾಯದವರು ಆತಂಕಪಡುವ ಅಗತ್ಯವಿಲ್ಲ. ಸಂದರ್ಭ ಬಂದರೆ ಮುಸ್ಲಿಮರ ಮೀಸಲಾತಿ ಪರವಾಗಿ ನಿಲ್ಲುತ್ತೇನೆ’ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.
ತಾಲ್ಲೂಕಿನ ಬಾವಿಹಳ್ಳಿ, ಹೊಳಗುಂದಿ, ಉತ್ತಂಗಿ ಗ್ರಾಮಗಳಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಪರ ಮತಯಾಚಿಸಿದ ಅವರು, ಎಸ್ಸಿ, ಎಸ್ಟಿ ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಈಡೇರಿಸಿ ಬಿಜೆಪಿ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದೆ. ಅಲ್ಪಸಂಖ್ಯಾತರ ಮೀಸಲಾತಿ ಯಥಾಸ್ಥಿತಿಯಲ್ಲಿ ಇರಲಿದೆ ಎಂದರು.
ಇಲ್ಲಿನ ಶಾಸಕರು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಯಾವ ವಿಶೇಷ ಯೋಜನೆಗಳನ್ನು ತರಲಿಲ್ಲ. ಹಿಂದೆ ಬಿಜೆಪಿಯ ಚಂದ್ರನಾಯ್ಕ ಶಾಸಕರಾಗಿದ್ದಾಗ ಕೆರೆ ತುಂಬಿಸುವ ಯೋಜನೆ, ಸಿಂಗಟಾಲೂರು ಯೋಜನೆ ಪೂರ್ಣಗೊಳಿಸಿ ರೈತರಿಗೆ ನೆರವಾಗಿದ್ದಾರೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಯೋಜನೆಗಳಿಗೆ ಬಿಜೆಪಿ ದೊಡ್ಡ ಕೊಡುಗೆ ನೀಡಿದೆ. ಈಗಿನ ಶಾಸಕರು ದರ್ಪ, ದೌರ್ಜನ್ಯದಿಂದ ನಡೆದುಕೊಂಡಿದ್ದು ಬಿಟ್ಟರೆ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ ಎಂದು ಟೀಕಿಸಿದರು.
ಕ್ಷೇತ್ರದಲ್ಲಿ ಶಾಸಕರ ಆಡಳಿತ ವಿರೋಧಿ ಅಲೆ ದಟ್ಟವಾಗಿದೆ. ಬಿಜೆಪಿ ಎಲ್ಲ ಮುಖಂಡರು ಒಗ್ಗಟ್ಟು ಪ್ರದರ್ಶಿಸಿರುವುದರಿಂದ ನಮ್ಮ ಅಭ್ಯರ್ಥಿ ಕೃಷ್ಣನಾಯ್ಕ ಗೆಲ್ಲುವುದು ಖಚಿತವಾಗಿದೆ. ಈ ಬಾರಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದ್ದು, ಮತ್ತೆ ಲಿಂಗಾಯತರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿ.ಚಂದ್ರನಾಯ್ಕ, ಮುಖಂಡರಾದ ಓದೋ ಗಂಗಪ್ಪ, ಎಂ.ಪರಮೇಶ್ವರಪ್ಪ, ಪಿ.ವಿಜಯಕುಮಾರ್, ಎಸ್.ಗುರುಸಿದ್ದಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಸಂಜೀವರೆಡ್ಡಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಎಚ್.ಪೂಜಪ್ಪ, ಎಂ.ಬಿ.ಬಸವರಾಜ, ಈಟಿ ಲಿಂಗರಾಜ, ಸುಭಾಸ ಕರೆಂಗಿ, ಕೆ.ಬಿ.ವೀರಭದ್ರಪ್ಪ, ಸಿ. ಮೋಹನರೆಡ್ಡಿ, ಸಿರಾಜ್ ಬಾವಿಹಳ್ಳಿ, ಎಲ್.ಸೋಮಿನಾಯ್ಕ, ಕೊಟ್ರೇಶನಾಯ್ಕ, ಕೆ.ಉಚ್ಚಂಗೆಪ್ಪ, ಕೃಷ್ಣಮೂರ್ತಿ ಇತರರು ಇದ್ದರು.
**
ಮನೆ ಮಗನನ್ನು ಆಶೀರ್ವದಿಸಿ
‘ನಾನು ಇದೇ ತಾಲ್ಲೂಕಿನ ಮನೆಯ ಮಗ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಕಾಂಗ್ರೆಸ್ನ ದರ್ಪ, ದೌರ್ಜನ್ಯದ ಆಡಳಿತ ಕೊನೆಗಾಣಿಸಿ, ಮನೆಯ ಮಗನಾದ ನನ್ನನ್ನು ಆಶೀರ್ವದಿಸಿ’ ಎಂದು ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಮನವಿ ಮಾಡಿದರು