ಹೊಸಪೇಟೆ: 2023–24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಪರೀಕ್ಷೆ–2ಕ್ಕೆ ನೋದಾಯಿಸಲು ಗುರುವಾರವೇ (ಮೇ 16) ಕೊನೆಯ ದಿನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಎಂ.ಚೆನ್ನಬಸಪ್ಪ ತಿಳಿಸಿದ್ದಾರೆ.
ಈ ಸಂಬಂಧ ಬಿಇಒ ಅವರು ಮಂಗಳವಾರ ಇಲ್ಲಿ ತಾಲ್ಲೂಕಿನ ಎಲ್ಲಾ 81 ಪ್ರೌಢಶಾಲೆಗೆ ಮುಖ್ಯ ಗುರುಗಳ ಸಭೆ ನಡೆಸಿದ್ದು, ಈ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ವಿಶೇಷ ಬೋಧನಾ ತರಗತಿಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಲು ಸೂಚಿಸಿದರು.
ಜೂನ್ 5ರವರೆಗೆ ಈ ವಿಶೇಷ ಬೋಧನಾ ತರಗತಿಗಳು ನಡೆಯಲಿವೆ. ಮಧ್ಯಾಹ್ನದ ಬಿಸಿಯೂಟ ನೀಡಬೇಕು ಎಂದು ತಿಳಿಸಿದರು.
ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ವಿದ್ಯಾರ್ಥಿಗಳ ಹಾಜರಾತಿಯು ಮಂಡಲಿಯ ನಿಯಮಾವಳಿಗಳನ್ವಯ ಶೇ 75 ಕ್ಕಿಂತಲೂ ಕಡಿಮೆ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳು ಪರೀಕ್ಷೆ-2 ರಲ್ಲಿ ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾಯಿಸಲು ಮಂಡಳಿಯು ಅವಕಾಶ ಕಲ್ಪಿಸಿದೆ ಎಂದು ಅವರು ಮಾಹಿತಿ ನೀಡಿದರು.