ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯ ಸಂಂಪೂರ್ಣ ತುಂಬಿರುವುದರಿಂದ ಮಂಗಳವಾರ ನದಿ ಮತ್ತು ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನೀರು ಹರಿಸಲಾಯಿತು.
105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 95 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 82 ಸಾವಿರ ಕ್ಯುಸೆಕ್ ಗೂ ಅಧಿಕ ಒಳಹರಿವು ಇದೆ. ನಿತ್ಯ ಸರಾಸರಿ ಎಂಟು ಟಿಎಂಸಿ ಅಡಿ ನೀರು ಹರಿದು ಬರುತ್ತಿದ್ದು, ಸಂಜೆಯೊಳಗೆ ಜಲಾಶಯ ಭರ್ತಿಯಾಗಲಿದೆ. ಇದನ್ನು ಮನಗಂಡು ಮಂಡಳಿ ಮಂಗಳವಾರ ನೀರು ಹರಿಸಿದೆ.
5 ಸಾವಿರ ಕ್ಯುಸೆಕ್ ನಿಂದ ಒಂದು ಲಕ್ಷ ಕ್ಯುಸೆಕ್ ವರೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ನದಿ ತೀರದ ಜನ ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ. ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ಅನಂತಪುರ, ಕರ್ನೂಲು ಜಿಲ್ಲಾಡಳಿತ ಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಮಂಡಳಿ ತಿಳಿಸಿದೆ.
ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್ ಪೂಜೆ ನೆರವೇರಿಸಿದ ನಂತರ ಕ್ರಸ್ಟ್ ಗೇಟ್ ಗಳಿಂದ ನೀರು ಹರಿಸಲಾಗುತ್ತಿದೆ.