ಹೊಸಪೇಟೆ: ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿದ್ದರಿಂದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಸೋಲು ಉಂಟಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದರು.
ಭಾನುವಾರ ಇಲ್ಲಿ ಮಾಧ್ಯಮದವರಿಗೆ ಚುನಾವಣಾ ಫಲಿತಾಂಶ ಬಗ್ಗೆ ಪ್ರತಿಕ್ರಿಯಿಸಿದ ಅವರು, ತೆಲಂಗಾಣದಲ್ಲಿ ಸಹ ಇದೇ ಪ್ರಯತ್ನ ನಡೆದರೂ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈಹಿಡಿದರು. ಕರ್ನಾಟಕದಲ್ಲಿ ಜಾರಿಗೆ ಬಂದ ಗ್ಯಾರಂಟಿಗಳ ಪ್ರಭಾವವೂ ತೆಲಂಗಾಣದಲ್ಲಿದೆ ಎಂದರು.
ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಇರಲಿಲ್ಲ, ಆದರೂ ಕಾಂಗ್ರೆಸ್ ಸೋಲು ಕಂಡಿರುವುದು ಅಚ್ಚರಿ ತಂದಿದೆ ಎಂದರು.
ಈ ವಿಧಾನಸಭೆ ಚುನಾವಣೆ ಫಲಿತಾಂಶ ಲೋಕಸಭಾ ಚುವಾವಣೆಯ ದಿಕ್ಸೂಚಿ ಅಲ್ಲ ಎಂದ ಅವರು, ಇದೇ 6 ರಂದು ಎಐಸಿಸಿ ಅಧ್ಯಕ್ಷರು ವಿರೋಧ ಪಕ್ಷಗಳ ಸಭೆ ಕರೆದಿದ್ದು, ಮುಂದಿನ ನಡೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು.