ವಿಜಯಪುರ: ಜುಲೈ 21 ರಂದು ಆಚರಿಸಲಾಗುವ ಬಕ್ರೀದ್ ಸಂದರ್ಭದಲ್ಲಿ ಆಕಳು, ಕರು, ಹೋರಿ, ಎತ್ತು ಸೇರಿದಂತೆ 13 ವರ್ಷದೊಳಗಿನ ಎಮ್ಮೆ ಕೋಣ ಹಾಗೂ ಒಂಟೆಗಳನ್ನು ಹತ್ಯೆ ಮಾಡುವಂತಿಲ್ಲ. ಈ ಕುರಿತು ಸೂಕ್ತ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬಕ್ರಿದ್ ಆಚರಣೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಕ್ರೀದ್ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಅತ್ಯವಶ್ಯಕತೆ ಇದೆ ಎಂದರು.
ಜಾನುವಾರುಗಳ ಅಕ್ರಮ ಸಾಗಾಣಿಕೆ ಹಾಗೂ ವಧೆಗಳ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಅಥವಾ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವಂತೆ ಅರಿವು ಮೂಡಿಸುವ ಹಾಗೂ ಪೊಲೀಸ್ ಇಲಾಖೆ ಮೂಲಕ ಚೆಕ್ಪೋಸ್ಟ್ ಸ್ಥಾಪಿಸಲಿದ್ದು, ಯಾವುದೇ ರೀತಿಯ ಅಕ್ರಮ ಸಾಗಾಣಿಕೆ ಆಗದಂತೆ ಕ್ರಮಕೈಗೊಳ್ಳಬೇಕು. ದಾಖಲಾತಿ ಇಲ್ಲದೆ ಜಾನುವಾರುಗಳ ಸಾಗಾಣಿಕೆ ಮಾಡುವುದು ಕಾನೂನಿನ ವಿರುದ್ದವಾಗಿದೆ ಎಂದರು.
ಜಾನುವಾರುಗಳನ್ನು ಖರೀದಿಸುವಾಗ, ಮಾರಾಟ ಮಾಡುವ ಸಂದರ್ಭದಲ್ಲಿ ಜಾನುವಾರುಗಳಿಗೆ ಕಿವಿ ಓಲೆ ಇರುವುದು ಕಡ್ಡಾಯವಾಗಿರುತ್ತದೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಧೃಡೀಕರಣ ಪತ್ರ ಪಡೆದುಕೊಂಡು ಸಾಗಾಣಿಕೆ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಅವರು ತಿಳಿಸಿದರು.
ಕಾನೂನು ಉಲ್ಲಂಘಿಸಿದವರಿಗೆ 3 ವರ್ಷಗಳಿಂದ 7 ವರ್ಷಗಳ ವರೆಗೆ ಕಾರಾಗೃಹವಾಸ ಅಥವಾ ಒಂದು ಜಾನುವಾರಿಗೆ ₹ 50 ಸಾವಿರ ರಿಂದ ₹ 5 ಲಕ್ಷ ದಂಡ ಹಾಗೂ 2ನೇ ಬಾರಿಗೆ ಅಪರಾಧ ಎಸಗಿದಲ್ಲಿ ₹ 1 ಲಕ್ಷದಿಂದ ₹ 10 ಲಕ್ಷ ವರೆಗೆ ದಂಡದೊಂದಿಗೆ 7 ವರ್ಷಗಳವರೆಗೆ ಕಾರಾಗೃಹವಾಸ ಶಿಕ್ಷೆ ಇರುತ್ತದ ಎಂದು ತಿಳಿಸಿದರು.
ರೈತರು ತಮ್ಮ ಜಾನುವಾರುಗಳನ್ನು ಯಾವುದೇ ಉದ್ದೇಶಕ್ಕಾಗಿ ಸಾಗಾಣಿಕೆ ಮಾಡುವ ಮುನ್ನ ಹತ್ತಿರದ ಪಶುವೈದ್ಯಾಧಿಕಾರಿಗಳು ಅಥವಾ ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇವರನ್ನು ಸಂಪರ್ಕಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ದಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಪ್ರಾಣೇಶ್ ಜಹಾಗೀರದಾರ್ಸಭೆಯಲ್ಲಿ ಉಪಸ್ಥಿತರಿದ್ದರು.