ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ ಮದರಿ ಹತ್ತಿರ ಇರುವ ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ ಚುನಾವಣಾ ವೀಕ್ಷಣಾ ದಳದವರು ಗುರುವಾರ ಸಂಜೆ ಪೊಲೀಸರೊಂದಿಗೆ ಎರಡನೇ ಬಾರಿ ಹಠಾತ್ ದಾಳಿ ನಡೆಸಿದರು.
ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಚಂದ್ರಕಾಂತ ಪವಾರ ಉಸ್ತುವಾರಿಯಲ್ಲಿ
ನಡೆದ ದಾಳಿಯ ವೇಳೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ ಭಾವಚಿತ್ರದ ಗೋಡೆ ಗಡಿಯಾರಗಳು, ಟೀ ಶರ್ಟ್ಗಳು ಪ್ಯಾಕಿಂಗ್ ಸ್ಥಿತಿಯಲ್ಲಿ ಲಭ್ಯವಾಗಿವೆ. ದಾಳಿಯಲ್ಲಿ ಅಂದಾಜು ₹40-50 ಲಕ್ಷದ ಸಾಮಗ್ರಿಗಳು ಸಿಕ್ಕಿವೆ ಎನ್ನಲಾಗಿದೆ. ಇದರಿಂದಾಗಿ ಚುನಾವಣಾಧಿಕಾರಿಗಳಲ್ಲಿಕಾರ್ಖಾನೆಯ ಚಟುವಟಿಕೆಗಳ ಮೇಲೆ ಸಂಶಯ ಹೆಚ್ಚಾಗಿದ್ದು ಇಡೀ ಕಾರ್ಖಾನೆಯ ಜಾಗವನ್ನು ಬಿಡದೆ ರಾತ್ರಿಯಿಡೀ ತಪಾಸಣೆ ನಡೆಸಿದ್ದಾರೆ.
ಕಾರ್ಖಾನೆಯ ವಿವಿಧೆಡೆ ನೆಲದಲ್ಲಿ ತಗ್ಗು ತೆಗೆದು ಬಚ್ಚಿಡಲಾಗಿದೆ ಎನ್ನುವ ಸಂಶಯದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜೆಸಿಬಿ ಯಂತ್ರಗಳನ್ನು ತರಿಸಲಾಗಿದೆ. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶದಾನಮ್ಮನವರ್, ಎಸ್.ಪಿ ಎಚ್.ಡಿ.ಆನಂದಕುಮಾರ, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ರೇಖಾ, ಪಿಎಸ್ಐ ಆರೀಫ ಮುಷಾಪುರಿ ಪೊಲೀಸ್ ಸಿಬ್ಬಂದಿ ಮತ್ತು ಚುನಾವಣೆಯ ಫ್ಲೈಯಿಂಗ್ ಸ್ಕ್ವಾಡ್ ತಂಡ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ
ಪರಿಶೀಲನೆಯಲ್ಲಿ ತೊಡಗಿದ್ದಾರೆ.
ದಾಳಿಯಲ್ಲಿ ವಶ ಪಡೆದುಕೊಂಡ ಸಾಮಗ್ರಿಗಳ ನಿಖರ ಮೊತ್ತ ಮತ್ತು ದಾಳಿಯ ಸಂಪೂರ್ಣ ವಿವರ ದಾಳಿ ಮುಗಿದ ಮೇಲೆ ಎಫ್ಐಆರ್ ದಾಖಲಿಸಿಕೊಂಡ ನಂತರ ಲಭ್ಯವಾಗಲಿದೆ.
ಇದು ಎರಡನೇ ಬಾರಿ ನಡೆದ ದಾಳಿ. ಮಾ.27ರಂದು ನಡೆದ ಮೊದಲ ದಾಳಿಯಲ್ಲಿ ಎಸ್.ಆರ್.ಪಾಟೀಲ ಭಾವಚಿತ್ರವಿರುವ ₹2.10 ಕೋಟಿ ಮೌಲ್ಯದ ಗೋಡೆ ಗಡಿಯಾರ, ಟೀ–ಶರ್ಟ್ ಮತ್ತು ಕ್ಯಾರಿಬ್ಯಾಗ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.