ವಿಜಯಪುರ: ‘ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ಬಿಜೆಪಿ ಮುಳುಗುತ್ತಿರುವ ಅಲ್ಲ, ಮುಳುಗಿದ ಹಡಗು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ವಿಷಯದ ಕುರಿತು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ’ ಎಂದರು.
‘ಚೈತ್ರಾ ಕುಂದಾಪುರ ಟಿಕೆಟ್ ವಿಚಾರದಲ್ಲಿ ವಂಚಿಸಿದರು. ಈ ಹಿಂದೆ ಬಿಜೆಪಿಯ 40 ಪರ್ಸೆಂಟ್ ಸರ್ಕಾರ ನೋಡಿದ್ದೇವೆ. ಈವರೆಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಆ ಪಕ್ಷಕ್ಕೆ ಸಾಧ್ಯ ವಾಗಿಲ್ಲ’ ಎಂದು ಟೀಕಿಸಿದರು.
‘ಕರ್ನಾಟಕದ ಸೋಲಿನಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಇನ್ನೂ ಚೇತರಿಸಿಕೊಂಡಿಲ್ಲ. ಇಲ್ಲಿನ ನಾಯಕರ ಮೇಲಿನ ಸಿಟ್ಟಿನಿಂದ ವಿಧಾನಸಭೆ ವಿರೋಧ ಪಕ್ಷದ ನಾಯಕರ ನೇಮಕಾತಿ ಆಗಿಲ್ಲ ಮತ್ತು ಅಧ್ಯಕ್ಷರ ಬದಲಾವಣೆ ಆಗಿಲ್ಲ. ಇದು ಬಿಜೆಪಿಯವರ ಕಥೆ. ರಾಜ್ಯದಲ್ಲಿ ಬಿಜೆಪಿಯ ಕಥೆ ಮುಗಿದಿದೆ. ಇನ್ನೆಂದೂ ಬಿಜೆಪಿಗೆ ತಲೆ ಮೇಲೆತ್ತಲು ಆಗಲ್ಲ’ ಎಂದರು.