ವಿಜಯಪುರ: ಪಿಎಸ್ಐ ನೇಮಕಾತಿ ಹಗರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ದೊಡ್ಡ ದೊಡ್ಡವರು ಇದ್ದಾರೆ ಎನ್ನಲಾಗುತ್ತಿದೆ. ಆ ದೊಡ್ಡವರು ಯಾರು ಎಂಬುದು ಬಹಿರಂಗವಾಗಬೇಕಿದೆ ಎಂದರು.
ಮಾಜಿ ಮುಖ್ಯಮಂತ್ರಿ ಮಗನೊಬ್ಬನೇ ಸುಮಾರು 150 ಪಿಎಸ್ಐ ಹುದ್ದೆಗಳಿಗೆ ಅಕ್ರಮವಾಗಿ ನೇಮಕ ಮಾಡಲು ತಲಾ ₹80 ಲಕ್ಷ ಹಣ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಮಗ ಅಂದರೆ ಯಾರು? ದೇವೇಗೌಡರ ಮಗನಾ, ಸಿದ್ದರಾಮಯ್ಯನವರ ಮಗನಾ ಅಥವಾ ಯಡಿಯೂರಪ್ಪನವರ ಮಗನಾ ಎನ್ನುವುದು ಸ್ಪಷ್ಟವಾಗಬೇಕು ಎಂದು ಆಗ್ರಹಿಸಿದರು.
ವರ್ಗಾವಣೆ ಬೇಡ
ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಸ್ಟ್ರಾಂಗ್ ಇದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಸರ್ಕಾರ ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿದರು.
ಪುಣ್ಯಾತ್ಮರು ಕೆಲಸ ಮಾಡಲಿ
ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಗ ಸಚಿವ ಸಂಪುಟ ವಿಸ್ತರಣೆ ಮಾಡುವುದು ಬೇಡ, ಇರುವ ಪುಣ್ಯಾತ್ಮರು ಕೆಲಸ ಮಾಡಲಿ ಎಂದು ವ್ಯಂಗ್ಯವಾಡಿದರು.
ಸಿದ್ದರಾಮ ಉರುಸ್
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆಯುತ್ತಿರುವುದು ಸಿದ್ದರಾಮೋತ್ಸವ ಅಲ್ಲ, ಅದು ಸಿದ್ದರಾಮ ಉರುಸ್ ಎಂದು ಯತ್ನಾಳ ವ್ಯಂಗ್ಯವಾಡಿದರು.
ಸಿದ್ದರಾಮಯ್ಯನವರು ಕೇವಲ ಮಸೀದಿಗೆ ಹೋಗಿ ಟೊಪ್ಪಿ ಹಾಕಿ ನಮಾಜ್ ಮಾಡಿದರೆ ಸಾಲದು, ದೇವಾಲಯಕ್ಕೂ ಭೇಟಿ ನೀಡಿ ಭಂಡಾರ ಹಚ್ಚಿಕೊಳ್ಳಬೇಕು. ಆಗ ಅವರು ಜಾತ್ಯತೀತ ಎಂಬುದು ಸಾಬೀತಾಗುತ್ತದೆ.
ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಸ್ ಬಗ್ಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಖಾಸಗಿ ಆಸ್ಪತ್ರೆಗಳಿಗೆ ಹೋದರೆ ₹ 2,500 ಹಣ ಕೊಡಬೇಕು. ಆರೋಗ್ಯ ಸಚಿವರು ಡಯಾಲಿಸಸ್ ಟೆಂಡರ್ ಖಾಸಗಿಯವರಿಗೆ ಯಾಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಈ ಸಂಬಂಧ ನಾನು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.