ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯ ಭ್ರಷ್ಟಾಚಾರ ರಹಿತ ಆಡಳಿತ ಜನಮನ ಗೆದ್ದಿದೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ಪ್ರಚಾರ ಸಭೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ
Published 11 ಏಪ್ರಿಲ್ 2024, 16:02 IST
Last Updated 11 ಏಪ್ರಿಲ್ 2024, 16:02 IST
ಅಕ್ಷರ ಗಾತ್ರ

ವಿಜಯಪುರ: ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಾದ ಬದಲಾವಣೆ, ಸಾಧನೆ, ಆರ್ಥಿಕ ಸುಧಾರಣೆ, ಜಾಗತಿಕ ಮನ್ನಣೆ, ಭ್ರಷ್ಟಾಚಾರ ರಹಿತ ಆಡಳಿತ ಜನಮನ ಗೆದ್ದು ಇಂದು ಮತ್ತೊಮ್ಮೆ ದೇಶಕ್ಕೆ‌ ಮೋದಿ ಆಡಳಿತ ಬರಬೇಕೆಂಬುದು ಇಡಿ ದೇಶದ ಕೂಗಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿ ಆಯೋಜಿಸಿದ್ದ ಪಾಲಿಕೆಯ ಐದು ವಾರ್ಡ್‌ಗಳ ವ್ಯಾಪ್ತಿಯ ಪಂಡಿತ ದೀನ್ ದಯಾಳ ಉಪಾಧ್ಯಾಯ ಮಹಾಶಕ್ತಿ ಕೇಂದ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರ‌ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಮೊದಲು‌ 400 ವಿಶ್ವವಿದ್ಯಾಲಯಗಳಿದ್ದವು, ಆದರೆ ಕಳೆದ 10 ವರ್ಷಗಳಲ್ಲಿ 1100 ವಿವಿಗಳಾಗಿವೆ. 41 ವಂದೇ ಭಾರತ್ ರೈಲುಗಳು ಓಡುತ್ತಿವೆ. ಮೆಡಿಕಲ್‌ ಕಾಲೇಜುಗಳ ಸಂಖ್ಯೆ 384 ರಿಂದ 700 ತಲುಪಿವೆ. ದೇಶದಲ್ಲಿ 74 ಇದ್ದ ವಿಮಾನ ನಿಲ್ದಾಣಗಳು ಇಂದು ವಿಜಯಪುರ ಸೇರಿ 154 ವಿಮಾನ ನಿಲ್ದಾಣಗಳಾಗಿವೆ. ಕೇವಲ 5 ನಗರಗಳಲ್ಲಿದ್ದ ಮೆಟ್ರೋ ಇಂದು 20 ನಗರಗಳಲ್ಲಿ ಮೆಟ್ರೋ ಸೇವೆ ಇದೆ. ಯುಪಿಎ ಅವಧಿಯಲ್ಲಿ 96 ಸಾವಿರ ಕಿ.ಮೀ‌ ಇದ್ದ ರಾಷ್ಟ್ರೀಯ ಹೆದ್ದಾರಿ ಇಂದು 1.50 ಲಕ್ಷ‌ ಕಿ.ಮೀ ನಷ್ಟು ಅಭಿವೃದ್ಧಿಯಾಗಿದೆ. 3.75 ಲಕ್ಷ ಕಿ.ಮೀ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗಿವೆ. ಹೀಗೆ ಹತ್ತು ಹಲವು ಅಪರಿಮಿತ ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.

ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿಯಲ್ಲಿ ಯಾವುದೇ ಒಡಕ್ಕಿಲ್ಲ. ದೇಶದ ರಕ್ಷಣೆ, ಏಲ್ಗೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಚುನಾವಣೆ ಮಾಡುತ್ತಿದ್ದೇವೆ. ಜಿಲ್ಲೆಯ ಮತದಾರರು ಪ್ರಬುದ್ಧರಾಗಿದ್ದಾರೆ. ವಿಜಯಪುರ ನಗರ ಮತಕ್ಷೇತ್ರದಲ್ಲಿ ಬಿಜೆಪಿ 25 ಸಾವಿರ ಲೀಡ್ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲಾ‌ ಜನತೆ ಮೇ 7 ರಂದು ಜರುಗುವ ಮತದಾನದಲ್ಲಿ ತಪ್ಪದೇ ಪಾಲ್ಗೊಂಡು ಬಿಜೆಪಿಗೆ ಮತ ಹಾಕಬೇಕೆಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ಕಳೆದ 65 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೇಶದ ಏಳಿಗೆಗೆ ಏನನ್ನು ಮಾಡದೇ ಕೇವಲ ತಮ್ಮ ಪಕ್ಷ ಹಾಗೂ ತಮ್ಮ ಮನೆ ತುಂಬಿಸಿಕೊಳ್ಳುವ ಕೆಲಸ ಮಾಡಿದ್ದರು‌. ಆದರೆ ಕಳೆದ 10 ವರ್ಷಗಳಲ್ಲಿ ಬಿಜೆಪಿ ಮಾಡಿದ ಸಾಧನೆ ಇಡಿ ವಿಶ್ವವೇ ಮೆಚ್ಚಿಕೊಂಡಿದೆ ಎಂದರು.

ಕೇಂದ್ರದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಹೋರಾಟ ಮಾಡಿ ಸುಮಾರು 42 ಸಾವಿರ ಕೋಟಿ‌ ವೆಚ್ಚದ ಕೂಡಗಿ ಎನ್‌ಟಿಪಿಸಿ ಸ್ಥಾಪನೆ, ತೀವ್ರ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ಇಂಡಿ‌ ಭಾಗದ ಸುಮಾರು‌76 ಹಳ್ಳಿಗಳಿಗೆ 120 ಕೋಟಿ‌ ಅನುದಾನದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ತಂದಿದ್ದೇನೆ.‌ ನಮ್ಮ‌ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೇ, ವಿಮಾನ ನಿಲ್ದಾಣ ಹೀಗೆ ಹತ್ತು ಹಲವು ಜನಪರ ಕೆಲಸಗಳಾಗಿವೆ ಎಂದರು.

ಇದು ನನ್ನ ಕಡೆಯ ಚುನಾವಣೆ. ಈ ಹಿಂದೆ ಮೋದಿಯವರು ಎರಡು ಬಾರಿ ಪ್ರಧಾನಿಯಾಗಲು ಜಿಲ್ಲೆಯ ಜನ ನನಗೆ ಕೈ ಎತ್ತಲು ಅವಕಾಶ ಮಾಡಿಕೊಟ್ಟಂತೆ ಮೋದಿಯವರಿಗಾಗಿ 3ನೇ ಬಾರಿ ಕೈ ಎತ್ತಲು ಜನತೆ‌ ನನಗೆ ಅವಕಾಶ ಮಾಡಿಕೊಂಡಬೇಕೆಂದು ಕೇಳಿಕೊಳ್ಳುತ್ತೇನೆ. ಹಾಗೇ ಇದು ನನ್ನ ಜೀವನದ ಕೊನೆಯಾಸೆ ಎಂದು ಸಂಸದ ರಮೇಶ ಜಿಗಜಿಣಗಿ ಭಾವುಕ ಮಾತುಗಳಾಡಿದರು.

ಮುಖಂಡರಾದ ವಿವೇಕಾನಂದ ಡಬ್ಬಿ, ಮಳುಗೌಡ ಪಾಟೀಲ, ಶಂಕರ ಹೂಗಾರ, ಸುರೇಶ ಬಿರಾದಾರ, ಬಸವರಾಜ ಬೈಚಬಾಳ, ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ಲಕ್ಷ್ಮೀ ಕನ್ನೊಳ್ಳಿ, ರಾಹುಲ ಔರಂಗಬಾದ್, ಮಹೇಶ್ ಒಡೆಯರ, ಸುನಿಲ್ ಜೈನಾಪುರ, ಪ್ರಭು ಕೆಂಗಾರ, ಪ್ರವೀಣ್ ಕೂಡ್ಗಿ, ಪಾಪುಸಿಂಗ್ ರಜಪೂತ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT