ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಗುರುವಾರ ರಾತ್ರಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಪ್ರತಿಯೊಬ್ಬರೂ ಇಂದಿನಿಂದಲೇ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಟಿಕೆಟ್ ಯಾರಿಗೇ ಸಿಕ್ಕರೂ ಎಲ್ಲರೂ ಒಮ್ಮತದಿಂದ ಬಿಜೆಪಿ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಭಾರತಕ್ಕೆ ಗೌರವ ಬಂದಿದೆ. ಭಾರತಕ್ಕೆ ಮೊದಲು ಹಾವಾಡಿಗರ, ಭಿಕ್ಷುಕರ ದೇಶ ಅನ್ನುತ್ತಿದ್ದರು. ಈಗ ಮೋದಿ ಬಂದ ನಂತರ ಆ ಮಾತು ದೂರಾಗಿದೆ ಎಂದರು.
ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, 2023ರ ಚುನಾವಣೆ ಬಬಲೇಶ್ವರದಲ್ಲಿ ಈಗ ಆರಂಭವಾಗಿದೆ. ₹ 500 ಬೆಲೆಯ ಸೀರೆ ಕೊಟ್ಟು ಕಾಂಗ್ರೆಸ್ನವರು ಒಂದು ಕಾರ್ಯಕ್ರಮ ಮಾಡಿದ್ದಾರೆ. ನಾನು ಏನು ಕೊಟ್ಟಿಲ್ಲ, ಕೇವಲ ಪೋನ್ ಮಾಡಿದ್ದೇನೆ. ಅಧಿಕಾರ ಇರದಿದ್ದರೂ ಕೂಡಾ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಮತಕ್ಷೇತ್ರದ ಪ್ರತಿ ಊರು, ತಾಂಡಾ, ವಸ್ತಿ, ದಡ್ಡಿಯ 20ಕ್ಕೂ ಹೆಚ್ಚು ಜನರ ಹೆಸರು ನಾನು ಹೇಳುತ್ತೇ, ಹಾಲಿ ಶಾಸಕರಿಗೆ ಸಾಧ್ಯವಾ? ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಜನರಿಂದ ದೂರವಿದ್ದಾರೆ. ಇಂತವರಿಗೆ ಈ ಬಾರಿ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು.
ಬಬಲೇಶ್ವರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಉಮೇಶ ಕೊಳಕೂರ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ಗುರಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ವಿವೇಕಾನಂದ ಡಬ್ಬಿ, ಸಂಜೀವ ಪಾಟೀಲ, ಸುರೇಶ ಬಿರಾದಾರ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗುರ ಇದ್ದರು.