ಮುದ್ದೇಬಿಹಾಳ(ವಿಜಯಪುರ): ಒಂಟೆಯೊಂದು ಬಾಲಕನಿಗೆ ಕಚ್ಚಿದ ಪರಿಣಾಮ ಆತನ ಮೂಗಿನ ಮೂಳೆ ಮುರಿದಿರುವ ಘಟನೆ ಪಟ್ಟಣದ ಮಹಾಂತೇಶ ನಗರದಲ್ಲಿ ಭಾನುವಾರ ಸಂಜೆ ನಡೆದಿದೆ.
ಪಟ್ಟಣದ ನೇತಾಜಿ ನಗರದ 12 ವರ್ಷದ ಬಾಲಕ ಅಮನ್ ಜಾಧವ ಎಂಬಾತನಿಗೆ ಒಂಟೆ ಕಚ್ಚಿ ಗಾಯಗೊಳಿಸಿದೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಹಲವು ದಿನಗಳಿಂದ ನಾಲ್ಕೈದು ಒಂಟೆಗಳು ನಿತ್ಯವೂ ವಿವಿಧ ವಾರ್ಡ್ಗಳಲ್ಲಿ ಸುತ್ತಾಡಿ, ಮಕ್ಕಳನ್ನು ಒಂಟೆಗಳ ಮೇಲೆ ಕೂಡಿಸಿ ₹10, ₹20 ಪಡೆದುಕೊಂಡು ಆಟವಾಡಿಸುತ್ತಿದ್ದರು.
ಭಾನುವಾರ ನೇತಾಜಿ ನಗರದಿಂದ ಮಹಾಂತೇಶ ನಗರದ ಕಡೆಗೆ ಒಂಟೆ ಹೊರಟಿದ್ದನ್ನು ಮಕ್ಕಳು ಕುತೂಹಲಭರಿತರಾಗಿ ನೋಡುತ್ತ ಬೆನ್ನತ್ತಿದ್ದಾರೆ. ಆಗ ಏಕಾಏಕಿ ಅಮನ್ಗೆ ಒಂಟೆ ಕಚ್ಚಿದೆ. ತಕ್ಷಣ ಆತನನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಒಂಟೆಯನ್ನು ಮಾಲೀಕರ ಸಮೇತ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಈವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.