ವಿಜಯಪುರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮದುವೆ ಮತ್ತಿತರರ ಶುಭ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ನಗರದಲ್ಲಿ ಪೊಲೀಸ್ ಕಲ್ಯಾಣ ಮಂಟಪ ಶೀಘ್ರ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಭರವಸೆ ನೀಡಿದರು.
ನಗರದಲ್ಲಿ ಗುರುವಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಂಗಳೂರು ಮಾದರಿಯಲ್ಲಿ ವಿಜಯಪುರದಲ್ಲೂ ಪೊಲೀಸ್ ತುರ್ತು ದೂರವಾಣಿ ಸಂಖ್ಯೆ 112 ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆ ಕಟ್ಟಡ, ಕ್ವಾಟ್ರರ್ಸ್ ನಿರ್ಮಾಣ, ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಬಡ್ತಿ ಸೇರಿದಂತೆ ಮೂಲಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಪೊಲೀಸರು ತಮ್ಮ ದೈನಿಂದನ ಕಾರ್ಯಗಳ ಜೊತೆಗೆ ಕೋವಿಡ್ ವಾರಿಯರ್ಸ್ಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೋವಿಡ್ ಸಂದರ್ಭದಲ್ಲಿಪೊಲೀಸರು ಹಳೆಯ ಪದ್ಧತಿಯಂತೆ ಕಾರ್ಯ ನಿರ್ವಹಿಸಲು ಆಗದು, ಹೀಗಾಗಿ ಅಪರಾಧಿಗಳನ್ನು ಬಂಧಿಸಿದ ಬಳಿಕ ಕೋರ್ಟ್ಗೆ ಹಾಜರು ಪಡಿಸುವ ಬದಲು ವಿಡಿಯೋ ಸಂವಾದದ ಮೂಲಕ ಹಾಜರು ಪಡಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಮಪ್ ಅಗರವಾಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ದಿ ಮತ್ತಿತರರು ಇದ್ದರು.