ಇಂಡಿ: ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸ್ಥಳೀಯ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ತಾಲ್ಲೂಕಿನ ಅಥರ್ಗಾ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಭಾನುವಾರ ನವೀಕೃತ ಕಟ್ಟಡ ಲೋಕಾರ್ಪಣೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸದ ರಮೇಶ ಜಿಗಜಿಣಗಿ ತಾವು ಕಲಿತ ಶಾಲೆಗೆ ₹1.50 ಕೋಟಿ ನೆರವು, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಹಳೆಯ ಶಾಲೆಗೆ ಹೊಸ ರೂಪ ಕೊಟ್ಟಿರುವುದು ಪ್ರಸಂಶನಿಯ ಎಂದರು.
ಸಿದ್ದೇಶ್ವರ ಶ್ರೀಗಳು ಈ ಭಾಗದಲ್ಲಿ ನೀರಾವರಿ ಆಗಬೇಕೆಂಬುದು ಅವರ ಕನಸಾಗಿತ್ತು. ನೀರಾವರಿ ಸಚಿವನಿದ್ದಾಗ ಪ್ರಯತ್ನ ಮಾಡಿದ್ದೇನೆ. ಈ ಬಾರಿಯೂ ಜಿಲ್ಲೆಯ ಎಲ್ಲ ಭಾಗಗಳಿಗೆ ಮತ್ತು ಇಂಡಿ ತಾಲ್ಲೂಕಿನ ಕೊನೆಯ ಭಾಗದವರೆಗೆ ನೀರು ಹರಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗುಗೌಡ ಪಾಟೀಲ ಮಾತನಾಡಿ, ಸಂಸದ ಜಿಗಜಿಣಗಿ ಹಾಗೂ ಶಾಸಕರ ಪರಿಶ್ರಮ, ವಿವಿಧ ಇಲಾಖೆ ಅನುದಾನದಿಂದ ₹1.50 ಕೋಟಿ ವೆಚ್ಚದಲ್ಲಿ ಹಳೆಯ ಶಾಲೆಯನ್ನು ನವೀಕರಿಸಲಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ನಿರ್ಮಿಸಬೇಕು ಎಂದರು.