ಕೊರೊನಾ ತಾತ್ಸಾರ; ಸಾವು ಹೆಚ್ಚಳ

ವಿಜಯಪುರ: ಕೊರೊನಾ ರೋಗ ಉಲ್ಬಣಗೊಂಡ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಚಿಕಿತ್ಸೆ ಫಲಿಸದೆ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಹೇಳಿದರು.
ನಗರದ ಡಾ.ಫ.ಗು.ಹಳಕಟ್ಟಿ ಭವನದಲ್ಲಿ ಕೆ.ಪಿ.ಸಿ.ಸಿ ವತಿಯಿಂದ ಆಯೋಜಿಸಿದ್ದ ಆರೋಗ್ಯ ಹಸ್ತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ನಾವು ಎಷ್ಟೇ ಮುಂಜಾಗ್ರತೆ ವಹಿಸಿದ್ದರೂ ಕೊರೊನಾ ಹಲವರನ್ನು ಬಲಿಪಡೆದಿದೆ. ನಮ್ಮ ಪಕ್ಷದ ಮುಖಂಡ ರವಿಗೌಡ ಪಾಟೀಲರಂತ ಹಿರಿಯರನ್ನು ನಾವು ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.
ಆರೋಗ್ಯ ಹಸ್ತ ಕಿಟ್ ವಿತರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರೊ.ರಾಜು ಆಲಗೂರ, ಕೊರೊನಾ ದೊಡ್ಡ ರೋಗವೇನಲ್ಲ. ಧೈರ್ಯದಿಂದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗುತ್ತಾರೆ ಎಂದರು.
ಪ್ರತಿ ಪಂಚಾಯ್ತಿಗೆ ಇಬ್ಬರು ಕಾರ್ಯಕರ್ತರನ್ನು ನೇಮಿಸಿ, ಸುರಕ್ಷಾ ಕಿಟ್, ಆಮ್ಲಜನಕ ಹಾಗೂ ಉಷ್ಣಾಂಶ ತಪಾಸಣಾ ಉಪಕರಣಗಳನ್ನು ನೀಡಿದ್ದು, ಅವರು ಮನೆ-ಮನೆಗೆ ತೆರಳಿ, ಜನರ ತಪಾಸಣೆ ಮಾಡಿ ದಾಖಲೆಗಳನ್ನು ಸಂಗ್ರಹಿಸಿ, ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಸೂಕ್ತ ಚಿಕಿತ್ಸೆ ಪಡೆಯುವಂತೆ ಸೂಚಿಸಬೇಕು ಎಂದರು.
ಕೆಪಿಸಿಸಿ ಉಸ್ತುವಾರಿ ಸದಾನಂದ ಡಂಗನವರ ಮಾತನಾಡಿ, ಜನರಿಗೆ ತೊಂದರೆಯಾದಾಗ ಮುನ್ನುಗ್ಗುವ ಗುಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ರಕ್ತಗತವಾಗಿ ಬಂದಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಕಾಂತಾ ನಾಯಕ, ರಾಜಶೇಖರ ಮೆಣಸಿನಕಾಯಿ, ರಾಜು ಗುಣದಾಳ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಶಾಂತ ದೇಸಾಯಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ, ಪ್ರವೀಣ ಪಾಟೀಲ, ಡಾ.ಮಹಾಂತೇಶ ಬಿರಾದಾರ ಇದ್ದರು.
ಇತ್ತೀಚೆಗೆ ನಿಧನರಾದ ರವಿಗೌಡ ಪಾಟೀಲ್ ಧೂಳಖೇಡ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.