ವಿಜಯಪುರ: ಕೊರೊನಾ ಸಂಕಷ್ಟದ ನಡುವೆಯೂ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ.
ಹಬ್ಬಕ್ಕೆ ಅಗತ್ಯವಿರುವ ಪೂಜಾ ಸಾಮಾನು, ಜವಳಿ, ಆಭರಣ, ವೈವಿಧ್ಯಮಯ ಆಕಾಶಬುಟ್ಟಿ, ಬಗೆಬಗೆಯ ಹಣತೆ, ಹೂವು, ಹಣ್ಣುಗಳು, ಆಲಂಕೃತ ಸಾಮಾನುಗಳ ಖರೀದಿ ನಗರದ ಮಾರುಕಟ್ಟೆಯಲ್ಲಿ ಶುಕ್ರವಾರ ಭರ್ಜರಿಯಾಗಿ ನಡೆಯಿತು.
ದೀಪಾವಳಿ ಖರೀದಿಗೆ ಹಳ್ಳಿಗಳಿಂದ ಹೆಚ್ಚಿನ ಜನರು ನಗರಕ್ಕೆ ಬಂದಿದ್ದ ಕಾರಣ ವಾಹನ ದಟ್ಟಣೆ ಹೆಚ್ಚಾಗಿತ್ತು. ರಸ್ತೆಗಳ ಇಕ್ಕೆಲಗಳಲ್ಲಿ ಬಗೆಬಗೆಯ ವಿದ್ಯುತ್ ದೀಪಗಳ ಸರ, ವೈವಿಧ್ಯಮಯ ಆಕಾಶಬುಟ್ಟಿ, ಹಣತೆ, ಚೆಂಡು ಹೂವು, ಹಣ್ಣುಗಳ ಮಾರಾಟ, ಖರೀದಿ ಜೋರಾಗಿತ್ತು.
ದೀಪಾವಳಿ ಹಿನ್ನೆಯಲ್ಲಿ ಹೂವು, ಹಣ್ಣು, ತೆಂಗಿನಕಾಯಿ, ಕುಂಬಳಕಾಯಿ, ಆಲಂಕಾರಿಕ ವಸ್ತುಗಳ ಬೆಲೆ ದುಪ್ಪಟ್ಟಾಗಿತ್ತು. ಕೋವಿಡ್ ಲಾಕ್ಡೌನ್ನಿಂದ ಕಳೆಕುಂದಿದ್ದ ನಗರ ಮಾರುಕಟ್ಟೆಗೆ ದೀಪಾವಳಿಯಿಂದ ಚೇತರಿಕೆ ಕಂಡುಬಂದಿತು.
ಶನಿವಾರದ ಲಕ್ಷ್ಮೀ ಪೂಜೆಗೆನಗರದ ಬಹುತೇಕ ಅಂಗಡಿ, ಮಳಿಗೆಗಳ ಎದುರು ವ್ಯಾಪಾರಸ್ಥರು ಶಾಮಿಯಾನ, ಚಪ್ಪರ ಹಾಕಿ, ವಿದ್ಯುತ್ ದೀಪ, ತಳಿರು ತೋರಣಗಳಿಂದ ಅಲಂಕರಿಸುತ್ತಿದ್ದ ದೃಶ್ಯ ಕಂಡುಬಂದಿತು.
ವಾಹನಗಳ ಖರೀದಿಯೂ ಈ ಬಾರಿ ಜೋರಾಗಿದ್ದು, ದೀಪಾವಳಿಗೆ ಗ್ರಾಹಕರು ಕೊಂಡೊಯ್ಯುತ್ತಿದ್ದರು. ಮನೆ,ಮನೆಗಳಲ್ಲಿ ಬೈಕು, ಕಾರು ಮತ್ತಿತರರ ವಾಹನಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ಪೂಜೆಗೆ ಅಣಿಗೊಳಿಸುವುದು ಕಂಡುಬಂದಿತು.
ಶುಕ್ರವಾರ ಮನೆಗಳಲ್ಲಿ ಬಲೀಂದ್ರ ಪೂಜೆ (ನೀರು ತುಂಬುವ) ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.