ವಿಜಯಪುರ: ಕೋವಿಡ್ ಲಾಕ್ಡೌನ್ ಪರಿಣಾಮ ಬಡವರು, ಕೂಲಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದು, ಸರ್ಕಾರ ನೆರವಿಗೆ ಬರಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಆಗ್ರಹಿಸಿದ್ದಾರೆ.
ಹಣವಿಲ್ಲದ ಪರಿಣಾಮ ಆಕ್ಸಿಜನ್ ಮತ್ತು ಔಷಧ ಸಿಗಲಾರದೆ ಸಾಯುತ್ತಿದ್ದಾರೆ. ಕೊವಿಡ್ದಿಂದ ಮರಣ ಹೊಂದಿದ ಕಾರ್ಮಿಕರಿಗೆ ಸರ್ಕಾರ ₹5 ಲಕ್ಷ ಪರಿಹಾರ ಹಣವನ್ನು ನೀಡಬೇಕು ಹಾಗೂ ಉಚಿತವಾಗಿ 10 ಕೆ.ಜಿ ಅಕ್ಕಿ, 3 ಕೆ.ಜಿ ಜೋಳ, 2 ಕೆ.ಜಿ ಗೋಧಿ ಕೂಡಲೇ ವಿತರಿಸಬೇಕು ಎಂದು ಆಗ್ರಹಿಸಿದರು.
ಗುಳೆ ಹೋದ ಕೂಲಿಕಾರ್ಮಿಕರಿಗೆ ತಮ್ಮ ಜಿಲ್ಲೆ ಮತ್ತು ಹಳ್ಳಿಗಳಿಗೆ ಹೋಗಲು ಸರಿಯಾದ ವ್ಯವಸ್ಥೆ ಮಾಡಬೇಕು ಎಂದರು.
ಕೇಂದ್ರ ಸರ್ಕಾರ ಬೆಲೆ ಏರಿಕೆಯಿಂದ ತತ್ತರಿಸಿದ ಕಾರ್ಮಿಕರಿಗೆ ₹ 21 ಸಾವಿರ ವೇತನ ನೀಡಬೇಕು. ಕೆ.ಎಸ್.ಆರ್.ಟಿ.ಸಿ. ನೌಕರರಿಗೆ ವರ್ಗಾವಣೆ ಮಾಡಿದ್ದನ್ನು ರದ್ದು ಪಡಿಸಿ 6ನೇ ವೇತನ ಜಾರಿ ಮಾಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.