ವಿಜಯಪುರ:ನಗರದ ಹವ್ಯಾಸಿ ವನ್ಯಜೀವಿ ಛಾಯಾಚಿತ್ರಗ್ರಾಹಕ ಧ್ರುವ ಪಾಟೀಲ್ ಅವರು ಅತ್ಯಂತ ಅಪರೂಪದ ಕರಿಚಿರತೆಯ ಚಿತ್ರವನ್ನು ಸೆರೆ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು,ಕಬಿನಿ ಅರಣ್ಯ ಪ್ರದೇಶದಲ್ಲಿ ಅತ್ಯಂತ ಅಪರೂಪದ ಪ್ರಬೇಧಕ್ಕೆ ಸೇರಿದ ಒಂದೇ ಒಂದು ಕಪ್ಪುಚಿರತೆ ಇದ್ದು, ಅದನ್ನು ಹೇಗಾದರೂ ಮಾಡಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕು ಎಂಬ ಇಚ್ಛೆಯಿಂದ ಮೇಲಿಂದ ಮೇಲೆ ಅಲ್ಲಿಗೆ ಭೇಟಿ ನೀಡಿ ಬೆಳಿಗ್ಗೆ ಮತ್ತು ಸಂಜೆ ಸಫಾರಿ ಮಾಡಿದೆ. ಕೊನೆಗೂ ಕಪ್ಪುಚಿರತೆಯ ಚಿತ್ರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು ತಿಳಿಸಿದರು.
‘ಕಬಿನಿ ಅರಣ್ಯ ಪ್ರದೇಶದ ಕೈಮರ ರಸ್ತೆಯಲ್ಲಿ ನೂರಾರು ಬಾರಿ ಸಂಚರಿಸಿ, ಕ್ಯಾಮೆರಾ ಕೈಯಲ್ಲಿ ಹಿಡಿದು ವಾರಗಟ್ಟಲೆ ಕಾದು ಈ ಕಪ್ಪುಚಿರತೆ ಚಿತ್ರ ಸೆರೆ ಹಿಡಿದಿದ್ದೇನೆ. ಇದು ವನ್ಯಜೀವಿ ಛಾಯಚಿತ್ರಗ್ರಾಹಕನಾಗಿ ನನ್ನ ಬದುಕಿನ ಅತೀ ಸಂತಸದ ಕ್ಷಣ’ ಎಂದು ಧ್ರುವ ಪಾಟೀಲ ಹೇಳಿದರು.
ದೇಶದಲ್ಲಿ 3 ರಿಂದ 5 ಕಪ್ಪುಚಿರತೆ ವಾಸವಾಗಿದ್ದು, ಕರಿಚಿರತೆಯ ಸಂತತಿ ‘ರಿಸೆಸ್ಸಿವ್’ ಸಂತತಿಯಾಗಿದ್ದು, ಇದು ಗರ್ಭಧರಿಸಿ, ಮರಿ ಹಾಕಿದರೂ ಕೂಡ ಅವು ಚಿರತೆ ಮರಿಯಂತೆ ಇರುತ್ತವೆ ಹೊರತು ಕರಿಚಿರತೆಗಳಾಗಿರುವುದಿಲ್ಲ. ಕಾರಣ ಇದರ ವಂಶವಾಹಿನಿಗಳ ವರ್ಗಾವರ್ಗಿ ಸುದೀರ್ಘವಾಗಿರುತ್ತದೆ ಎಂದು ಅವರು ತಿಳಿಸಿದರು.
ಧುವ್ರ ಪಾಟೀಲ್ ಅವರು ವಿಜಯಪುರದ ಬಿಎಲ್ಡಿಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದಶಾಸಕ ಎಂ.ಬಿ.ಪಾಟೀಲ ಅವರ ಪುತ್ರರಾಗದ್ದಾರೆ.