ವಿಜಯಪುರ: ಡೋಣಿ ನದಿ ಹೂಳೆತ್ತುವ ಸಂಬಂಧ ಜಲತಜ್ಞ ಡಾ.ರಾಜೇಂದ್ರ ಸಿಂಗ್ ಅವರು ಧ್ವನಿ ಎತ್ತಿರುವುದು ಸ್ವಾಗತಾರ್ಹ. ನದಿಯ ಹೂಳೆತ್ತುವ ಕೆಲಸವನ್ನು ಎಂದೋ ಮಾಡಬೇಕಾಗಿತ್ತು ಎಂದು ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.
ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತುಕೊಂಡು ಪ್ರತಿವರ್ಷ ಮಳೆಗಾಲದಲ್ಲಿ ತನ್ನ ಪಥ ಬದಲಿಸುವ ಡೋಣಿ ನದಿಯ ಪ್ರವಾಹದಿಂದ ನಲುಗಿ ಹೋಗುತ್ತಿರುವ ಜನರ ಜೀವನವನ್ನ ಸರಿಪಡಿಸುವ ಪ್ರಯತ್ನ ಶೀಘ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಸ್ವಾಮ್ಯದ ವ್ಯಾಪಕೋ ಸಂಸ್ಥೆ ಡೋಣಿ ನದಿಯ ಸರ್ವೆ ಮಾಡಿ ಸವಿವರ ವರದಿ ನೀಡಿದೆ.ಪ್ರಸ್ತಾವನೆ ಕೇಂದ್ರದಲ್ಲಿಯೇ ಬಾಕಿ ಉಳಿದಿದೆ. ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸ್ಪಂದಿಸದಿರುವುದು ನೋವನ್ನುಂಟು ಮಾಡಿದೆ. ಪ್ರಸ್ತಾವನೆಯ ಅನುಷ್ಠಾನಕ್ಕಾಗಿ ನಮ್ಮ ಭಾಗದ ರೈತರು ಮತ್ತು ಜನರೊಂದಿಗೆ ಸೇರಿ ಹೋರಾಟ ರೂಪಿಸುವುದು ಒಳ್ಳೆಯದು ಎಂದು ಅವರು ಸಲಹೆ ನೀಡಿದ್ದಾರೆ.
ಈ ಹೋರಾಟದ ನೇತೃತ್ವವನ್ನು ಶಾಸಕ ಎಂ.ಬಿ.ಪಾಟೀಲ್ ವಹಿಸಿಕೊಳ್ಳಬೇಕು ಎಂದು ಸಂಗಮೇಶ ಬಬಲೇಶ್ವರ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.