ವಿಜಯಪುರ: ನಗರದ ಐತಿಹಾಸಿಕ ಆನಂದ ಮಹಲ್ ಪಾರಂಪರಿಕ ಕಟ್ಟಡದಲ್ಲಿ ₹ 5 ಕೋಟಿ ಅಂದಾಜು ವೆಚ್ಚದಲ್ಲಿ ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು ಎಂದುಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಹೇಳಿದರು.
ನಗರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಳ್ಳಲಾದ ಪ್ರಸ್ತಾವನೆಗಳ ಕುರಿತು ಪ್ರವಾಸೋದ್ಯಮ ಅಧಿಕಾರಿಗಳೊಂದಿಗೆ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
₹ 1.36 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ನಗರದ ಪ್ರಮುಖ ಐತಿಹಾಸಿಕ ಸ್ಮಾರಕಗಳ ಬಳಿ ನಿರ್ಮಿಸಲಾಗಿರುವ ಉದ್ಯಾನಗಳಿಗೆ ಗಗನ ಮಹಲ್ ಕಂದಕದಿಂದ ನೀರು ಸರಬರಾಜು ಮಾಡುವ ಕಾಮಗಾರಿ ಕುರಿತು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಸಭೆಯ ಬಳಿಕ ನಗರದ ಐತಿಹಾಸಿಕ ಸ್ಮಾರಕ ಆನಂದ ಮಹಲ್, ಹೆರಿಟೇಜ್ ಪಾಥ್ವೇ ಕಾಮಗಾರಿ, ಗಗನ ಮಹಲ್ ಕಂದಕದಿಂದ ಇತರೆ ಸ್ಮಾರಕಗಳಿಗೆ ನೀರು ಪೂರೈಕೆ ಮಾಡುವ ಸ್ಥಳಗಳನ್ನು ಪರಿಶೀಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ನಗರದ ಹರಣಶಿಕಾರಿಯಲ್ಲಿರುವ ವೀಕ್ಷಣಾಲಯ ಹಾಗೂ ಮನಗೂಳಿ ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಬಾಲಮಂದಿರದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು.