ಸಿಂದಗಿ: ‘ಕಣ್ಣಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈಚೆಗೆ ಚಿಕ್ಕ ವಯಸ್ಸಿನವರಲ್ಲಿಯೂ ಕಣ್ಣಿನ ತೊಂದರೆ ಎದ್ದು ಕಾಣುತ್ತಲಿದೆ’ ಎಂದು ಸಾರಂಗಮಠ-ಗಚ್ಚಿನಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಇಲ್ಲಿಯ ಕೇಂದ್ರೀಯ ಬಸ್ ನಿಲ್ದಾಣದ ಹಿಂದೆ ಶುಕ್ರವಾರ ವಾರದ ಕಣ್ಣಿನ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ಸಿಂದಗಿಯಲ್ಲಿ ತೀರ ಅಗತ್ಯವಾಗಿದ್ದ ಅತ್ಯಾಧುನಿಕ ಸೌಲಭ್ಯವುಳ್ಳ ಕಣ್ಣಿನ ಆಸ್ಪತ್ರೆಯ ಕೊರತೆಯನ್ನು ವಾರದ ಮನೆತನ ಪೂರೈಸಿದೆ. ವಾರದ ಮನೆತನ ಧರ್ಮಕಾರ್ಯ, ಸಮಾಜಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಈಗ ವೈದ್ಯಕೀಯ ಸೇವೆಗೂ ಮುಂದಾಗಿರುವುದು ಸ್ವಾಗತಾರ್ಹ ಎಂದು ಪ್ರಶಂಸಿದರು.
ಕನ್ನೊಳ್ಳಿ ಹಿರೇಮಠದ ಶತಾಯುಷಿಗಳಾದ ಲಿಂಗೈಕ್ಯ ಮರುಳಾರಾಧ್ಯ ಶ್ರೀಗಳ ಸದಾಶಯದಂತೆ ವಾರದ ಕುಟುಂಬ ಕಣ್ಣಿನ ಆಸ್ಪತ್ರೆ ಆರಂಭಿಸಿರುವುದು ಸಮಯೋಚಿತವಾಗಿದೆ ಎಂದು ಕನ್ನೊಳ್ಳಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ‘ಸಿಂದಗಿಯ ವಾರದ ಮನೆತನಕ್ಕೆ ವ್ಯಾಪಾರ ಕ್ಷೇತ್ರದಲ್ಲಿ 100 ವರ್ಷಗಳ ಇತಿಹಾಸ ಇದೆ. ಇವರು ಸಾಮಾಜಿಕ ಸೇವೆಯ ಜೊತೆಗೆ ವೈದ್ಯಕೀಯ ಸೇವೆಗೂ ಮುಂದಾಗಿದ್ದು ಇದು ಬಡವರಿಗೆ ಉಪಯುಕ್ತವಾಗಲಿದೆ’ ಎಂದು ತಿಳಿಸಿದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ‘ಪ್ರಸ್ತುತ ಸಂದರ್ಭದಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಚಿಕ್ಕಮಕ್ಕಳು ಕೂಡ ಕಣ್ಣಿನ ತೊಂದರೆ ಎದುರಿಸುತ್ತಿದ್ದಾರೆ’ ಎಂದರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ವರ್ತಕರ ಸಂಘದ ಅಧ್ಯಕ್ಷ ಅಶೋಕ ವಾರದ ಪ್ರಾಸ್ತಾವಿಕವಾಗಿ ಮಾತನಾಡಿ, ‘ವಾರದ ಕಣ್ಣಿನ ಆಸ್ಪತ್ರೆಯಲ್ಲಿ ಕಡು ಬಡತನವುಳ್ಳ ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡಲಾಗುವುದು’ ಎಂದರು.
ಡಾ.ವಿಜಯಕುಮಾರ ವಾರದ ಹಾಗೂ ಡಾ.ಸುಷ್ಮಾ ವಿಜಯಕುಮಾರ ವಾರದ ಮಾತನಾಡಿದರು. ಡಾ.ಶಶಿಕಲಾ ವಾರದ, ಡಾ.ಆರ್.ಸಿ.ಬಿದರಿ ವಿಜಯಪುರ, ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೊಸಮನಿ ಪಾಲ್ಗೊಂಡಿದ್ದರು.