ಮುದ್ದೇಬಿಹಾಳ (ವಿಜಯಪುರ): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿರುವ ಘಟನೆ ಪಟ್ಟಣದ ತಾಳಿಕೋಟೆ ರಸ್ತೆಯ ಓಸ್ವಾಲ್ ಸಾ ಮಿಲ್ ಎದುರಿಗೆ ಶನಿವಾರ ಬೆಳ್ಳಂಬೆಳಿಗ್ಗೆ ನಡೆದಿದೆ.
ಕಾಯಿಪಲ್ಯೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ತಾಲ್ಲೂಕಿನ ಕವಡಿಮಟ್ಟಿ ಗ್ರಾಮದ ಯಲ್ಲಮ್ಮ ಸಿದ್ದಪ್ಪ ಕಾಳಗಿ (36) ಕುಡುಗೋಲಿನ ಏಟಿನಿಂದ ಅಸ್ವಸ್ಥಗೊಂಡಿದ್ದಾರೆ. ಈಕೆಯ ಪತಿ ಸಿದ್ದಪ್ಪ ಕಾಳಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ಎರಡು ವರ್ಷಗಳಿಂದ ಪತಿ -ಪತ್ನಿ ಪರಸ್ಪರ ದೂರವೇ ಇದ್ದು, ಜೀವನ ನಡೆಸುತ್ತಿದ್ದರು.
ಮುದ್ದೇಬಿಹಾಳ ಆಶ್ರಯ ಕಾಲೊನಿಯಲ್ಲಿ ಯಲ್ಲಮ್ಮ ಜೀವನ ಸಾಗಿಸುತ್ತಿದ್ದಳು. ಬೆಳಿಗ್ಗೆ ಕಾಯಿಪಲ್ಯೆ ಖರೀದಿಗೆಂದು ತೆರಳುತ್ತಿದ್ದ ವೇಳೆ ಕುಡುಗೋಲಿನಿಂದ ಪತ್ನಿಯನ್ನು ಕೊಚ್ಚಿದ್ದಾನೆ. ಸುತ್ತ ಮುತ್ತ ಇದ್ದವರು ಕೂಗಾಡಿ ಬಿಡಿಸಲು ಮುಂದಾದರೂ ಅವರಿಗೆ ಕುಡುಗೋಲು ತೋರಿಸಿ ಬೆದರಿಸಿದ್ದಾನೆ. ಇದರಿಂದ ಮಹಿಳೆ ರಕ್ಷಣೆಗೆ ಮುಂದಾದವರು ಹಿಂದೆ ಸರಿದಿದ್ದಾರೆ.
ಕುಡುಗೋಲಿನ ಏಟಿನಿಂದ ಅಸ್ವಸ್ಥಗೊಂಡ ಯಲ್ಲಮ್ಮಳನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ ಎಂದು ಪಿಎಸ್ ಐ ಸಂಜಯ ತಿಪರೆಡ್ಡಿ ಮಾಹಿತಿ ನೀಡಿದ್ದಾರೆ.