ವಿಜಯಪುರ: ಕೃಷ್ಣಾ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಸಿದ್ದನಾಥ ಗ್ರಾಮದ ಬಳಿ ನದಿಯಲ್ಲಿ ನಿನ್ನೆ ಸಂಜೆ ತೆಪ್ಪದ ಮೂಲಕ ಮೂವರು ಮೀನುಗಾರಿಕೆಗೆ ತೆರಳಿದ್ದರು.
ಈ ವೇಳೆ ಭಾರೀ ಮಳೆಗಾಳಿಗೆ ಮುಗುಚಿದೆ.ಮೂವರ ಪೈಕಿ ಅಕ್ಷಯ ಲಮಾಣಿ ಈಜಿ ದಡ ಸೇರಿದ್ದಾರೆ. ಪರಶುರಾಮ ಲಮಾಣಿ (35) ಮತ್ತು ರಮೇಶ ಲಮಾಣಿ (38) ಈವರೆಗೂ ಪತ್ತೆಯಾಗಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಕೊಲ್ಹಾರ ತಹಶೀಲ್ದಾರ್ ಎಂ.ಎಸ್.ಭಗವಾನ್ ಹಾಗೂ ಪೊಲೀಸರು ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಶೋಧ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯೂ ಸ್ಥಳಕ್ಕೆ ಬಂದಿದ್ದು, ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.