ವಿಜಯಪುರ: ಶಿಕ್ಷಣ ಎಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದಿಂದ ಚಾರಿತ್ರ್ಯ ನಿರ್ಮಾಣ, ಚಾರಿತ್ರ್ಯ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ವಿಜಯಪುರ–ಗದಗ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಶ್ರೀ ಕೃಪಾಮಯಿ ಶಾರದಾ ಆಶ್ರಮದ ವತಿಯಿಂದ ಆಯೋಜಿಸಲಾಗಿದ್ದಮಕ್ಕಳ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವಲ್ಲಿ ಮಕ್ಕಳಿಗೆ ಸಂಸ್ಕಾರ ಕೊಡುವುದು ಬಹಳ ಮುಖ್ಯ, ಉನ್ನತ ಉದಾತ್ತ ಚಿಂತನೆಗಳು ಮಕ್ಕಳ ಮನಸ್ಸನ್ನು ವಿಕಾಸಗೊಳಿಸುತ್ತವೆ ಎಂದರು.
ಇಂತಹ ಸಂಸ್ಕಾರ ಶಿಬಿರಗಳಲ್ಲಿ ಮಕ್ಕಳ ಮಾನಸಿಕ-ದೈಹಿಕ ಬೌದ್ಧಿಕ ಮತ್ತು ಆಧ್ಯಾತ್ಮಿಕವಾದ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವಂತಹ ಅನೇಕ ವಿಷಯಗಳನ್ನು ತಿಳಿಸಿಕೊಟ್ಟಿರುವುದು ಪ್ರಶಂಸನೀಯ ಕಾರ್ಯ ಎಂದು ನುಡಿದರು.
ಕೃಪಾಮಯಿ ಶಾರದಾಶ್ರಮದ ಅಧ್ಯಕ್ಷರಾದ ಕೈವಲ್ಯಮಯಿ ಮಾತಾಜಿ ಮಾತನಾಡಿ, ಮಕ್ಕಳು ಶಿಬಿರದಲ್ಲಿ ಕಲಿತಿರುವ ಎಲ್ಲ ನೀತಿ ಬೋಧನೆಗಳನ್ನು ಹಾಗೂ ಅಭ್ಯಾಸಗಳನ್ನು ಮನೆಯಲ್ಲಿ ಪ್ರತಿದಿನ ಮುಂದುವರಿಸಲು ಮತ್ತು ಮಕ್ಕಳು ಇದನ್ನು ಜೀವನದಲ್ಲಿ ಅನುಷ್ಠಾನ ಮಾಡುವ ಹಾಗೆ ಮಕ್ಕಳ ಬೆಳವಣಿಗೆಯ ಕಡೆ ಲಕ್ಷ್ಯವಿಡಿ ಎಂದು ಪಾಲಕರಿಗೆ ತಿಳಿ ಹೇಳಿದರು.
ಉಪ ವಿಭಾಗಾಧಿಕಾರಿ ಬಲರಾಮ್ ಚವ್ಹಾಣ, ಉತ್ತಮ ಸಂಸ್ಕಾರವನ್ನು ಹೊಂದಿದ ಮಕ್ಕಳೇ ನಮ್ಮ ದೇಶವನ್ನು ಉನ್ನತ ಸ್ಥಾನಕ್ಕೇರಿಸುವಲ್ಲಿ ಸಫಲರಾಗುವುದು ಹಾಗಾಗಿ ಸಮಾಜದಲ್ಲಿ ಇಂತಹ ಶಿಬಿರಗಳು ಹೆಚ್ಚೆಚ್ಚು ನಡೆಯಲಿ ಎಂದು ಹೇಳಿದರು.
ಅನುರಾಧ ಟಂಕಸಾಲೆ ಮಕ್ಕಳಿಗೆ ಪ್ರಶಸ್ತಿ ಮತ್ತು ಬಹುಮಾನ ವಿತರಣೆ ಮಾಡಿದರು. ಶಿಬಿರದಲ್ಲಿ ಮಕ್ಕಳಿಗೆ ಯೋಗ, ಭಗವದ್ಗೀತೆ ಪಠಣ, ಭಜನೆ ಹಾಗೂ ಮಕ್ಕಳ ವ್ಯಕ್ತಿತ್ವ ನಿರ್ಮಾಣ, ಆಟೋಟಗಳನ್ನು ಏರ್ಪಡಿಸಲಾಗಿತ್ತು.