ತಿಕೋಟಾ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಹೊನವಾಡ, ಬಿಜ್ಜರಗಿ, ಹುಬನೂರ, ಟಕ್ಕಳಕಿ, ಘೋಣಸಗಿ, ಕಳ್ಳಕವಟಗಿ, ಸೋಮದೇವರಹಟ್ಟಿ ಭಾಗದ ಹಳ್ಳಗಳು ತುಂಬಿ ಹರಿಯುತ್ತಿವೆ.
ಮಳೆಯಿಂದ ತುಂಬಿದ ಬಾಂದಾರಗಳು ಜಲಪಾತದಂತೆ ಧುಮುಕಿ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ಯುವಕರಿಗೆ ಸೆಲ್ಫಿ ತಾಣಗಳೂ ಆಗಿವೆ.
ತಾಲ್ಲೂಕಿನ ಕಳ್ಲಕವಟಗಿ ಗ್ರಾಮದ ಸಂಗಮನಾಥ ದೇವಾಲಯದ ಹತ್ತಿರ ಇರುವ ಬಾಂದಾರವು ಮೈದುಂಬಿ ಹರಿಯುತ್ತಿದೆ. ಹಳ್ಳದಲ್ಲಿರುವ ಸಂಗಮನಾಥ ದೇವಾಲಯ ಜಲಾವೃತವಾಗಿದೆ.
ರೈತರಿಗೆ ಸಂಕಷ್ಟ: ಜಿಟಿ ಜಿಟಿ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರರಿಗೆ ಔಷಧ ಸಿಂಪಡಿಸಲು ಆಗುತ್ತಿಲ್ಲ. ಔಷಧ ಹೊಡೆಯದಿದ್ದರೆ ಬಳೆ ಹಾಳಾಗುವ ಆತಂಕದೊಂದಿಗೆ, ದುಬಾರಿ ಬೆಲೆಯ ಔಷಧ ಸಹ ಹಾಳಾಗುವ ಆತಂಕ ಎದುರಾಗಿದೆ.
ತೊಗರಿ ಬೆಳೆಯಲ್ಲಿ ಕಾಣಿಸಿಕೊಂಡಿರುವ ಕೀಟಗಳ ನಿಯಂತ್ರಣಕ್ಕೆ ಔಷಧ ಹೊಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.