ವಿಜಯಪುರ: ನನ್ನ ನಸೀಬು ಚನ್ನಾಗಿದ್ದರೆ ನಾಳೆಯೇ ಮುಖ್ಯಮಂತ್ರಿ ಆಗಬಹುದು ಎಂದು ಸಚಿವ ಉಮೇಶ ಕತ್ತಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಮುಖ್ಯಮಂತ್ರಿ ಆಕಾಂಕ್ಷಿ. ಹಾಗಂತ ಈಗಲ್ಲ. ಇನ್ನೂ 15 ವರ್ಷ ಸಮಯಾವಕಾಶ ಇದೆ. ಯಾವಾಗಲಾದರೂ ಆಗಬಹುದು ಎಂದರು.
ಈಗಾಗಲೇ ಒಂಬತ್ತು ಬಾರಿ ಶಾಸಕನಾಗಿದ್ದೇನೆ. ನನಗೆ ಮುಂದೆ ಅವಕಾಶ ಸಿಕ್ಕೇ ಸಿಗುತ್ತದೆ. ಬೊಮ್ಮಾಯಿ ತೆಗೆದು ಮುಖ್ಯಮಂತ್ರಿಯಾಗುವ ಆಶೆ ಇಲ್ಲ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರು ಮುಂದುವರಿಯುತ್ತಾರೆ. ಮುಖ್ಯಮಂತ್ರಿ ಹುದ್ದೆ ನಮ್ಮಲ್ಲಿ ಖಾಲಿ ಇಲ್ಲ ಎಂದರು.
ಬೊಮ್ಮಾಯಿ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ. ಅವರ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಬಿಜೆಪಿಯೇ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಕಾಂಗ್ರೆಸ್ನವರಿಗೆ ಮಾಡಲು ಕೆಲಸ ಇಲ್ಲ.ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ವದಂತಿ ಹಬ್ಬಿಸುವುದನ್ನು ಬಿಟ್ಟು ಪಕ್ಷ ಕಟ್ಟಲು ಆದ್ಯತೆ ನೀಡಲಿ ಎಂದು ಸಲಹೆ ನೀಡಿದರು.