ದೇವರಹಿಪ್ಪರಗಿ: ಸ್ವಾತಂತ್ರ್ಯ ಬಂದ ನಂತರ ಜಿಲ್ಲೆಗೆ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದು, ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ರೈತರ, ಜನರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ಶನಿವಾರ ಜರುಗಿದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಕಮಲ ಅರಳಬೇಕೆಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಹಾಗೂ ರಾಜ್ಯದಲ್ಲಿನ ಡಬಲ್ ಎಂಜಿನ್ ಸರ್ಕಾರ ಉತ್ತಮ ಕೆಲಸ ಮಾಡಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದೆ. ಮುಂದೆಯೂ ಬಿಜೆಪಿ ಖಂಡಿತವಾಗಿಯೂ ಅಧಿಕಾರಕ್ಕೆ ಬರುತ್ತದೆ ಎಂದು
ಕಲ್ಯಾಣ ಕರ್ನಾಟಕದಿಂದ ಕಿತ್ತೂರ ಕರ್ನಾಟಕದವರೆಗೂ ವಿಜಯಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಇದು ಕೇವಲ ವಿಜಯ ಸಂಕಲ್ಪ ಯಾತ್ರೆಯಲ್ಲ ಇದೊಂದು ವಿಜಯೋತ್ಸವ ಎನಿಸುತ್ತಿದೆ. ಈ ನಿಟ್ಟಿನಲ್ಲಿ ಇಂದಿನಿಂದಲೇ ಎಲ್ಲರೂ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದರು.
ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿದ ಕೀರ್ತಿ ಶಾಸಕ ಸೋಮನಗೌಡ ಪಾಟೀಲರಿಗೆ ಸೇರುತ್ತದೆ. ಸಮಗ್ರ ನೀರಾವರಿಗಾಗಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಕ್ಷೇತ್ರದಲ್ಲಿ ನೂರಾರು ಕೋಟಿ ಅನುದಾನದ ಮೂಲಕ ರಸ್ತೆಗಳ ಅಭಿವೃದ್ಧಿ, ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಸುಮಾರು ₹2500 ಕೋಟಿ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಡಬಲ್ ಎಂಜಿನ್ ಸರ್ಕಾರ ನುಡಿದಂತೆ ನಡೆದು ಪ್ರಗತಿ ಸಾಧಿಸಿದೆ. 2023ರಲ್ಲಿ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಮತ್ತೇ ಬಿಜೆಪಿ ಬಾವೂಟ ಹಾರಬೇಕು ಎಂದು ಮನವಿ ಮಾಡಿಕೊಂಡರು.
ಯಾತ್ರೆಯ ಅಂಗವಾಗಿ ಅಂಬೇಡ್ಕರ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಲಾಯಿತು. ನಂತರ ಡೊಳ್ಳು ಕುಣಿತ, ಬಂಜಾರ ನೃತ್ಯ, ಹಲಗೆ ಮೇಳ, ಬೊಂಬೆ ಕುಣಿತದೊಂದಿಗೆ ಯಾತ್ರೆ ರಾಷ್ಟ್ರೀಯ ಹೆದ್ದಾರಿ-50ರ ಮೂಲಕ ಬಸ್ ನಿಲ್ದಾಣ, ಮೊಹರೆ ಹನುಮಂತರಾಯ ವೃತ್ತ ತಾಳಿಕೋಟಿ ರಸ್ತೆಯ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಿತು.
ಮುಖಂಡರಾದ ಡಾ.ಆರ್.ಆರ್.ನಾಯಿಕ್, ಚಂದ್ರಶೇಖರ ಕವಟಗಿ, ವಿವೇಕಾನಂದ ಡಬ್ಬಿ, ಅನೀಲ ಜಮಾದಾರ, ಭೀಮನಗೌಡ ಸಿದರೆಡ್ಡಿ, ಸುರೇಶಗೌಡ ಪಾಟೀಲ ಸಾಸನೂರ, ಶಿಲ್ಪಾ ಕುದರಗೊಂಡ, ಗಾಯತ್ರಿ ದೇವೂರ, ಪ್ರಭುಗೌಡ ಬಿರಾದಾರ ಅಸ್ಕಿ, ರಮೇಶ ಮಸಬಿನಾಳ, ಸೋಮು ಹಿರೇಮಠ, ಸಾಹೇಬಗೌಡ ಪಾಟೀಲ ಸಾಸನೂರ, ಮೋಹನ್ ಹಿರೇಗೌಡರ, ರಾಮನಗೌಡ ನಾವದಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.