ತಿಕೋಟಾ: ತಾಲ್ಲೂಕಿನ ರತ್ನಾಪುರ ಗ್ರಾಮದಲ್ಲಿ ಮಂಗಳವಾರ ಮತ್ತು ಬುಧವಾರ ದರ್ಗಾದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.
ಸೋಮವಾರ ಸಂಜೆ ದುರ್ಗಾ ದೇವಿಯ ಮೂರ್ತಿಯನ್ನು ಹೊಳೆ ಸ್ನಾನಕ್ಕಾಗಿ ಚಿಕ್ಕಪಡಸಲಗಿಗೆ ತೆಗೆದುಕೊಂಡು ಹೋಗಿ, ಕೃಷ್ಣಾ ನದಿಯಲ್ಲಿ ಸ್ನಾನ ಹಾಗೂ ಮೂರ್ತಿ ಪೂಜೆ ಮಾಡಲಾಯಿತು.
ಮಂಗಳವಾರ ಬೆಳಿಗ್ಗೆ ರತ್ನಾಪುರ ಗ್ರಾಮಕ್ಕೆ ತಂದ ನಂತರ ಬೆಳಿಗ್ಗೆ 8 ಗಂಟೆಗೆ ದೇವಿಯ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ಸ್ಥಳೀಯ ಯುವಕರಿಂದ ಡೊಳ್ಳಿನ ಪದಗಳ ಹಾಡುಗಳು ಜರುಗಿದವು. ರಾತ್ರಿ ‘ಕಲಿಯುಗದಲ್ಲಿ ಕೃಷ್ಣಾರ್ಜುನ’ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಬುಧವಾರ ಬೆಳಿಗ್ಗೆ ಎತ್ತಿನ ಗಾಡಿಯ ಸ್ಪರ್ಧೆ ಜರುಗಿತು. ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಗೋಕಾಕ, ವಿಜಯಪುರ, ಬಾಗಲಕೋಟೆ ಕಡೆಯಿಂದ ಸ್ಪರ್ಧಾ ಗಾಡಿಗಳು ಪಾಲ್ಗೊಂಡಿದ್ದವು. ಸಂಜೆ 6 ಗಂಟೆಯಿಂದ ಕಬಡ್ಡಿ ಟೂರ್ನಿ ನಡೆಯಿತು.
ಜಾತ್ರಾ ಮಹೋತ್ಸವದಲ್ಲಿ ಭಗೀರಥ ಯುವಕ ಸಂಘದ ಅಧ್ಯಕ್ಷ ಎಂ.ಡಿ.ರಾಣಗಟ್ಟಿ, ವಿಶ್ವನಾಥ ನರಳೆ, ಮಹೇಶ ಕರ್ತೆ, ಸುನಿಲ್ ಮಿಸಾಳ, ಜ್ಯೋತಿಬಾ ಮಿಸಾಳ, ಅಮೋಘಸಿದ್ಧ ಮಿಸಾಳ, ರತ್ನಾಪುರ ಗ್ರಾಮಸ್ಥರು, ಉಪ್ಪಾರ ಟೈಗರ್ಸ್ ಹಾಗೂ ಆದಿಶಕ್ತಿ ಯುವಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.