ವಿಜಯಪುರ: ಕೃಷ್ಣೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂಬ ಈ ಭಾಗದ ಜನಪ್ರತಿನಿಧಿಗಳ ಕೋರಿಕೆ ಮೇರೆಗೆ ಕಾವೇರಿಗೂ ಮೊದಲೇ ಕೃಷ್ಣೆಗೆ ಬಾಗಿನ ಅರ್ಪಿಸಿರುವುದಾಗಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಅವಳಿ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಶನಿವಾರ ಬಾಗಿನ ಅರ್ಪಿಸಿದ ಬಳಿಕ ಅವರು ಮಾತನಾಡಿದರು.
ಕೃಷ್ಣೆಗೆ ಭಕ್ತಿ, ಭಾವದಿಂದ ಪೂಜೆ ಸಲ್ಲಿಸಿದ್ದೇನೆ. ಗಂಗಾಮಾತೆಯ ಆಶೀರ್ವಾದ ಸದಾಕಾಲ ನಾಡಿಗೆ ಇರಲಿ ಎಂದು ಬೇಡಿಕೊಂಡಿರುವೆ, ಸಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆ ಬರಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಹವಾಮಾನ ವೈಫರಿತ್ಯದ ನಡುವೆ ರೈತರು ಬದುಕುವಂತಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಇತರೆ ಉದ್ಯೋಗವನ್ನು ಮಾಡಿದರೆ ಆರ್ಥಿಕವಾಗಿ ಸದೃಢರಾಗಿ ಬದುಕಲು ಸಾಧ್ಯ ಎಂದರು.
ಬಾಗಿನ ಅರ್ಪಿಸುವ ಮುನ್ನಾ ಮುಖ್ಯಮಂತ್ರಿ ಅವರನ್ನು ವಾದ್ಯ ಮೇಳಗಳೊಂದಿಗೆ ಜಲಾಶಯಕ್ಕೆ ಸ್ವಾಗತಿಸಲಾಯಿತು.ಬೊಮ್ಮಾಯಿ ಅವರು ಕೃಷ್ಣೆಗೆ ವಿಶೇಷ ಮಂಗಳಾರತಿ, ಪೂಜೆ ಸಲ್ಲಿಸಿದರು.ತಳಿರು, ತೋರಣ, ಹೂವಿನ ತೋರಣ, ರಂಗೋಲಿಯಿಂದ ಜಲಾಶಯದ ಆವರಣವನ್ನು ಅಲಂಕರಿಸಲಾಗಿತ್ತು.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಆಲಮಟ್ಟಿಗೆ ಆಗಮಿಸಿದ ಬೊಮ್ಮಾಯಿ ಅವರನ್ನು ಸ್ವಾಗತಿಸುವ ಬ್ಯಾನರ್, ಫ್ಲೆಕ್ಸ್ಗಳು ಎಲ್ಲೆಲ್ಲೂ ರಾರಾಜಿಸುತ್ತಿದ್ದವು.
ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯ, ಉದ್ಯಾನ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿತ್ತು.
***
ಕನ್ನಡ ನಾಡಿನ ಸುಭಿಕ್ಷೆರೈತ ಸಮುದಾಯದ ಸುಭಿಕ್ಷೆಯಲ್ಲಿ ಇದೆ. ರೈತರ ಹೊಲಕ್ಕೆ ನೀರು ಕೊಟ್ಟರೆ ಅವರು ಬಂಗಾರದ ಬೆಳೆ ಬೆಳೆಯುತ್ತಾರೆ