ಹೊರ್ತಿ: ರಾಜ್ಯ ಮತ್ತು ಕೇಂದ್ರ ಸರ್ಕಾರ ಹಿರಿಯರಿಗೆ ಮಹತ್ವ ಕೊಟ್ಟು ಆರ್ಥಿಕವಾಗಿ ದುರ್ಬಲರಾದ ಎಲ್ಲ ಹಿರಿಯ ನಾಗರಿಗೆ ಕನಿಷ್ಠ ₹ 5ಸಾವಿರ ಮಾಸಿಕ ವೇತನ, ಉಚಿತ ಆರೋಗ್ಯ ಸೇವೆ, ಹಿರಿಯರ ನಾಗರಿಕರ ಭವನ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜೀವನ ಗೌರವ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷ ವಿಜಯ ದೇಶಮುಖ ಹೇಳಿದರು.
ಸಮೀಪದ ಕನ್ನೂರಿನ ಸಿದ್ಧಲಿಂಗ ಶಿವಯೋಗಿ ಹಿರೇಮಠದಲ್ಲಿ ಅಖಿಲ ಭಾರತ ಹಿರಿಯ ನಾಗರಿಕರ ಸಂಘ, ರಾಷ್ಟ್ರೀಯ ಅರ್ಥಕ್ರಾಂತಿ ಮಂಚ್, ನಿವೃತ್ತ ಸರ್ಕಾರಿ ನೌಕರರು ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನ, ಜ್ಯೇಷ್ಠರ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕ ಅಧ್ಯಕ್ಷ ಬಿ.ಎ.ಪಾಟೀಲ ಮಾತನಾಡಿ, ‘ಸರ್ಕಾರದ ಸೌಲಭ್ಯಗಳನ್ನು ಪಡೆಯಲು 60 ವರ್ಷ ಮೀರಿದ ಹಿರಿಯ ನಾಗರಿಕರು ಹೆಸರು ನೋಂದಾಯಿಸಬೇಕು’ ಎಂದರು.
ಸಾನ್ನಿಧ್ಯ ವಹಿಸಿದ್ ಹಿಪ್ಪರಗಿಯ ಪ್ರಭು ಮಹಾರಾಜರು ಮಾತನಾಡಿ, ‘ಇಂದಿನ ಯುವ ಜನಾಂಗ ಹಿರಿಯರಿಗೆ ಗೌರವ ನೀಡಬೇಕು, ಮುಪ್ಪಾವಸ್ಥೆಯಲ್ಲಿರುವ ಅವರನ್ನು ದೂರವಿಡದೇ, ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಕನ್ನೂರ ಹಿರೇಮಠದ ಶಿವಸಿದ್ಧಲಿಂಗ ಶಿವಯೋಗಿಗಳ ಮಹಾಪೋಷಕತ್ವದಲ್ಲಿ ನಡೆದ ಸಭೆಯ ಸಾನ್ನಿಧ್ಯವನ್ನು ಕನ್ನೂರು ಮಠದ ಗಿರಿಮಲ್ಲೇಶ್ವರ ಮಹಾರಾಜರು ವಹಿಸಿದ್ದರು.
ಸಿಟಿಜನ್ ಫೋರಂ ಕಾರ್ಯದರ್ಶಿ ಕೇಶವ ಕುಮಾರ, ಆರ್.ಕೆ. ಮಠದ, ರವೀಂದ್ರ ಮಹಾರಾಜರು ಮೇಡೆಗಾರ, ವಿವಿಧ ಪದಾಧಿಕಾರಿಗಳಾದ ಎಂ.ಡಿ.ಪಾಟೀಲ, ಎಸ್.ಎಂ.ಕೋಳೂರ, ಡಿ.ಟಿ.ಪಾಟೀಲ, ವಿರುಪಾಕ್ಷಯ್ಯ ಮಠಪತಿ, ಸುನಂದಾ ಬೆನ್ನೂರ, ಎಸ್.ಎಸ್.ಭಟ್, ಧರಣೇಂದ್ರ ಜವಳಿ, ಆರ್.ಟಿ.ದೊಡಮನಿ ಇದ್ದರು.