ವಿಜಯಪುರ: ನಾರದ ಮುನಿ ಎಂದರೆ ಅಲ್ಲಿನ ವಿಷಯ ಇಲ್ಲಿಗೆ, ಇಲ್ಲಿನ ವಿಷಯ ಅಲ್ಲಿಗೆ ಹೇಳುತ್ತಾರೆ ಎಂಬುದು ಪ್ರಚಲಿತದಲ್ಲಿದೆ. ಆದರೆ ಬುದ್ಧಿವಾದದ ಮೂಲಕ ಲೋಕೋದ್ಧಾರ ಮಾಡಿದ ಶ್ರೇಯಸ್ಸು ನಾರದರಿಗೆ ಸಲ್ಲುತ್ತದೆ ಎಂದು ಸಂಜೀವ ಜೋಶಿ ಹೇಳಿದರು.
ಮಂಥನ ವಿಜಯಪುರ ಘಟಕದ ಆಶ್ರಯದಲ್ಲಿ ವಿಜಯಪುರದ ಶುಭಶ್ರೀ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಾರದ ಜಯಂತಿ ಅವರು ಮಾತನಾಡಿದರು.
ಧರ್ಮದ ಪರವಾಗಿ ನಾರದರು ಸದಾ ಇದ್ದರು, ನದಿ, ಗಿಡಮರಗಳಂತೆ ಅವರ ಜೀವನ ಇತ್ತು. ನಾರದರು ಎಂದೂ ತಮಗಾಗಿ ಬದುಕಲಿಲ್ಲ, ಸಮಾಜಕ್ಕಾಗಿ ಬದುಕಿದರು ಎಂದರು.
ನಾರದ ಮುನಿಗಳ ಜೀವನ ಅಧ್ಯಯನ ಮಾಡಿ ಅವರ ಶ್ರೇಷ್ಠ ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ನಾರದ ಮುನಿಗಳು ಮೂರು ಲೋಕದ ವರದಿಗಾರರಾಗಿದ್ದರು. ಒಂದು ರೀತಿ ಸರ್ವವ್ಯಾಪಿಯಾಗಿದ್ದರು, ತ್ರಿಲೋಕದ ಸುವಾರ್ತೆ ನೀಡುತ್ತಿದ್ದ ನಾರದ ಮುನಿಗಳು ಒಬ್ಬ ಶ್ರೇಷ್ಠ ಹಾಗೂ ಆದ್ಯ ಪತ್ರಕರ್ತ ಎಂದರು.
ನಾರದ ಮುನಿಗಳು 64 ವಿದ್ಯೆಗಳಲ್ಲಿ ಪಾರಂಗತವಾಗಿದ್ದರು. ನಾರದ ಮುನಿ ಮನುಕುಲಕ್ಕೆ ಜ್ಞಾನ ಕೊಡುವ ಶ್ರೇಷ್ಠ ವ್ಯಕ್ತಿ ಎಂದರು.